ಹಳಿಯಾಳ: ಅಪ್ರತಿಮ ರಾಷ್ಟ್ರಭಕ್ತ, ಜಗತ್ತಿಗೆ ಇಂದಿಗೂ ಅಜರಾಮರ ನಾಯಕನಾಗಿ ಉಳಿದಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿ-ಗಲ್ಲಿಗಳಲ್ಲಿ ಸ್ಥಾಪನೆ ಮಾಡುತ್ತೇವೆ, ತಾಕತ್ತಿದ್ದರೇ ತಡೆದು ನೋಡಿ ಎಂದು ಸನಾತನ ಹಿಂದೂ ಧರ್ಮ ಪ್ರಚಾರಕಿ ಚೈತ್ರಾ ಕುಂದಾಪುರ ಸವಾಲ್ ಹಾಕಿದರು.
ಶೀವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಹಳಿಯಾಳ ಪಟ್ಟಣದಲ್ಲಿ ನವರಾತ್ರಿಯ 9ದಿನಗಳ ಕಾಲ ನಡೆದ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ದೇಶ ವಿಶ್ವಗುರುವಾಗಲು ಹೊರಟಿದ್ದು ಹಿಂದೂತ್ವವೇ ಎವರ್ಗ್ರೀನ್ ಟ್ರೆಂಡ್ ಆಗಲಿದೆ ಎಂದು ಅಭಿಪ್ರಾಯಪಟ್ಟ ಚೈತ್ರಾ ಶಿವಾಜಿ ಮಹಾರಾಜರ ರಾಷ್ಟ್ರಭಕ್ತಿಯನ್ನು ಎಲ್ಲರೂ ಅನುಸರಿಸಬೇಕೆಂದರು.
ದೇಶದಲ್ಲಿನ ಮೇಕಾಲೆ ಶಿಕ್ಷಣ ಪದ್ದತಿ ಬದಲಾಗಬೇಕಿದೆ ಎಂದ ಅವರು ಹಿಂದೂಗಳಿಗೆ ಇನ್ನೂ ಸ್ವಾತಂತ್ರ್ಯ ದೊರಕಿಲ್ಲ ತಮ್ಮ ದೇವತೆಗಳ ಪೂಜನೆಗೆ ಪೋಲಿಸ್ ಇಲಾಖೆಯಿಂದ ಪರವಾನಿಗೆ ಪಡೆಯಲು ಅಲೆದಾಡುವ ದುರ್ದೈವ ಹಿಂದೂಗಳಿಗೆ ಇದೆ. ನಿಜವಾದ ಸ್ವಾತಂತ್ರ್ಯ, ಹಿಂದವಿ ಸ್ವರಾಜ್ಯ ಸ್ಥಾಪನೆಗೆ ಹಾಗೂ ಭಾರತಕ್ಕೆ ಅಂಟಿರುವ ಮತಾಂತರ ಎಂಬ ದೊಡ್ಡ ಪಿಡುಗನ್ನು ಹೋಗಲಾಡಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.
ತಾಯಿ ದುರ್ಗಾಮಾತೆ ಹಾಗೂ ಭಾರತಾಂಬೆಯನ್ನು ಒಂದೆ ಎಂದು ನಂಬುವ ಹಿಂದೂಗಳು, ನಾವು ಹಿಂದೂ ಧರ್ಮದಲ್ಲಿ ಹೆಣ್ಣನ್ನು ಸಮಾನವಾಗಿ ಕಾಣುವುದಿಲ್ಲ ಬದಲಾಗಿ ಸರ್ವಶ್ರೇಷ್ಠಳನ್ನಾಗಿ ಪೂಜಿಸುತ್ತೇವೆ. ಹಿಂದೂ ಧರ್ಮಕ್ಕೆ ಇಂದಿಗೂ ಶ್ರೀರಾಮನೆ ಆದರ್ಶ ಪುರುಷನಾಗಿದ್ದಾನೆ. ತಾಜಮಹಲ್ ಪ್ರೇಮದ ಕುರುಹಲ್ಲ ಬದಲಾಗಿ ಜಗತ್ತಿನ ಯಾವ ವಿಜ್ಞಾನಿಯಿಂದಲೂ ಭೇದಿಸಲಾಗದ ಶ್ರೀರಾಮ ಸೇತು ಅಮರ ಪ್ರೇಮದ ಕುರುಹು ಎಂದು ಪ್ರತಿಪಾದಿಸಿದರು.
ಹೆಣ್ಣು ಮಕ್ಕಳಿಗೆ ಪವಿತ್ರ ಶಬರಿಮಲೆ ಪ್ರವೇಶದ ಕುರಿತು ತೀರ್ಪು ನೀಡಿರುವುದು ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಸುಪ್ರಿಂಕೊರ್ಟ ಹೆಣ್ಣು ಮಕ್ಕಳಿಗೆ ಮಸೀದಿ ಪ್ರವೇಶಕ್ಕೆ ತೀರ್ಪು ನೀಡಲಿ ಎಂದರು.
ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಅಲ್ಲದೇ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಧರ್ಮವನ್ನು ಒಡೆಯುವ ಹಾಗೂ ಧರ್ಮದ ಪವಿತ್ರತೆ ಹಾಳು ಮಾಡುವ ದೊಡ್ಡ ಷಡ್ಯಂತ್ರ ನಡೆದಿದ್ದು ಹಿಂದೂಗಳು ಇದನ್ನು ಅರಿತು “ಸರ್ವೇ ಜನಾ ಸುಖಿನೋ ಭವಂತು” ಎನ್ನುವ ಧರ್ಮವನ್ನು ಒಗ್ಗಟ್ಟಾಗಿ ರಕ್ಷಿಸುವ ಕಾರ್ಯ ಮಾಡಬೇಕಿದೆ ಎಂದು ಕರೆ ನೀಡಿದರು.
ಶೀವಪ್ರತಿಷ್ಠಾನದ ಪ್ರಮುಖ ರಾಜು ಧೂಳಿ ಮಾತನಾಡಿ 7 ವರ್ಷಗಳ ಹಿಂದೆ ಕೇವಲ 20 ಜನರಿಂದ ಆರಂಭವಾದ ದುರ್ಗಾದೌಡ ಧಾರ್ಮಿಕ ನಡಿಗೆ ಇಂದು ಸಹಸ್ರಾರು ಜನ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿದ್ದು 9ದಿನಗಳ ಕಾಲ ದುರ್ಗಾದೌಡಗಾಗಿ ಶ್ರಮಿಸಿದ ಪಟ್ಟಣದ ಎಲ್ಲ ಬಡಾವಣೆ ಜನರಿಗೆ ಧನ್ಯವಾದ ಅರ್ಪಿಸಿದ ಧೂಳಿ ಮತಾಂತರ ಚಟುವಟಿಕೆಗಳು ತಾಲೂಕಿನಲ್ಲಿ ಹೆಚ್ಚಿದ್ದು ಇದರ ವಿರುದ್ದ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಕೊನೆಯ ದಿವಸ ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಹೋರಟ ದುರ್ಗಾದೌಡ ಶೆಟ್ಟಿಗಲ್ಲಿ, ಕಿಲ್ಲಾಪ್ರದೇಶ, ಬಸವನಗಲ್ಲಿ, ದೇಸಾಯಿಗಲ್ಲಿಯಲ್ಲಿ ಸಾಗಿ ಗ್ರಾಮದೇವಿ ಉಡಚಮ್ಮಾ ದೇವಸ್ಥಾನಕ್ಕೆ ತಲುಪಿ ಕಾರ್ಯಕ್ರಮ ಸಮಾರೋಪಗೊಂಡಿತು. ಗೋಮಾತೆ, ಶಿವಾಜಿ ಮಹಾರಾಜರ, ಸ್ವಾಮಿ ಅಯ್ಯಪ್ಪನ 18 ಮೆಟ್ಟಿಲುಗಳು ಇತರೇ ಸ್ತಬ್ದಚಿತ್ರಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಶನಿಧಾಮದ ಸ್ವಾಮಿ ಮೇಘನಾಥಜಿ ಹಾಗೂ ಪ್ರಮುಖರು ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
Leave a Comment