ಹಳಿಯಾಳ:- ರಾಮನಗರ ಜಿಲ್ಲೆ ಕನಕಪುರದಲ್ಲಿ ಇದೆ ದಿ.23ರಿಂದ 25ರ ವರೆಗೆ ನಡೆಯಲಿರುವ
2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಕುಸ್ತಿ ಪಟು ಬಾಲಕಿಯರನ್ನು ಕೈಬಿಟ್ಟಿದ್ದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅರಳಬೇಕಿದ್ದ ಪ್ರತಿಭೆಗಳು ಜಿಲ್ಲಾ ಮಟ್ಟದಲ್ಲೇ ಕಮರಿಹೊಗಬೇಕಾದ ಪರಿಸ್ಥಿತಿಯನ್ನು ಸಾರ್ವಜನೀಕರ ಶಿಕ್ಷಣ ಇಲಾಖೆ ತಂದೊಡ್ಡಿರುವುದು ಪಾಲಕರ ಹಾಗೂ ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಕೂಲ್ ಗೇಮ್ಸ್ ಪೇಡರೆಷನ್ ಆಫ್ ಇಂಡಿಯಾದವರ ನಿಯಮಾವಳಿ ಪ್ರಕಾರ 14 ವರ್ಷ ಒಳಗಿನ ಕುಸ್ತಿ ಕ್ರೀಡಾಪಟು ಬಾಲಕಿಯರಿಗೂ ಸ್ಪರ್ದೆಯಲ್ಲಿ ಭಾಗವಹಿಸುವ ಎಲ್ಲ ಅವಕಾಶವಿದೆ. ಆದರೇ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕ್ಷೇತ್ರದಲ್ಲೇ ಮಹಿಳಾ ಕ್ರೀಡಾಪಟುಗಳಿಗೆ ಇರುವ ಅವಕಾಶದಿಂದಲೂ ವಂಚಿತರನ್ನಾಗಿ ಮಾಡಲಾಗುತ್ತಿರುವುದು ಕ್ರೀಡಾಭಿಮಾನಿಗಳು, ಪಾಲಕರು ಹಾಗೂ ಕ್ರೀಡಾಪಟುಗಳ ಆಕ್ರೋಶಕ್ಕೆ ಎಡೆಮಾಡಿದೆ.
ಈ ಹಿಂದೆ ಬಿಜಾಪುರದ ಇಂಡಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿಯೂ 17 ವರ್ಷದೊಳಗಿನ ಮಹಿಳಾ ಕ್ರೀಡಾಪಟುಗಳನ್ನು ಕೈ ಬಿಡಲಾಗಿತ್ತು. ಸಾರ್ವಜನೀಕ ಶಿಕ್ಷಣ ಇಲಾಖೆಯ ಈ ಕ್ರಮದಿಂದ ಅಸಮಾಧಾನಗೊಂಡಿದ್ದ ಮಾಜಿ ಅಂತರಾಷ್ಟ್ರೀಯ ಕುಸ್ತಿಪಟು ರತನಕುಮಾರ ಮಠಪತಿ ನಡೆಸಿದ ಪ್ರತಿಭಟನೆ ಫಲವಾಗಿ ಕೊನೆಯ ಕ್ಷಣದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದರ ಪರಿಣಾಮ 5 ಜನ ರಾಷ್ಟ್ರಮಟ್ಟದಲ್ಲಿ ಮಿಂಚಿ ಪದಕದ ಬೇಟೆಯಾಡಿ ರಾಜ್ಯಕ್ಕೆ ಕೀರ್ತಿ ತಂದರು ಅಲ್ಲದೇ ಕೆಲವರು ಖೇಲೊ ಇಂಡಿಯಾ ಕ್ರೀಡಾವೇತನಕ್ಕೂ ಆಯ್ಕೆಯಾಗಿರುವುದು ಇನ್ನೂ ಮಾಸುವ ಮುನ್ನವೇ ಮತ್ತೇ ಈ ವರ್ಷ 14 ವರ್ಷದೊಳಗಿನ ಬಾಲಕಿಯರಿಗೆ ರಾಜ್ಯಮಟ್ಟದ ಪಂದ್ಯಾವಳಿಯಿಂದ ವಂಚಿತರನ್ನಾಗಿಸುವ ಮೂಲಕ ಅರಳುವ ಮುನ್ನವೇ ಪ್ರತಿಭೆಗಳನ್ನು ಹೊಸಕಿ ಹಾಕಲಾಗುತ್ತಿರುವುದು ಕ್ರೀಡಾಪಟುಗಳ ದುರ್ದೈವವೇ ಸರಿ.
ಉತ್ತರ ಕನ್ನಡ ಜಿಲ್ಲೆಯ ಕ್ರೀಡಾ ವಸತಿ ನಿಲಯದಲ್ಲಿ 26 ಜನ ಮಹಿಳಾ ಕ್ರೀಡಾಪಟುಗಳಿದ್ದು 8 ಜನ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಬಾಗಲಕೋಟ ಜಿಲ್ಲೆಯಲ್ಲಿ 7ಜನರಿದ್ದು 7ಜನರೂ ಆಯ್ಕೆಯಾಗಿದ್ದಾರೆ. ಬೆಳಗಾವಿಯಲ್ಲಿ 19ಜನರಿದ್ದು 7ಜನರು ಹಾಗೂ ಗದಗನಲ್ಲಿ 25 ಜನರಿದ್ದು 6ಜನ ಬಾಲಕಿಯರು 14 ವರ್ಷದೊಳಗಿನ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಈ ಎಲ್ಲ ಕ್ರೀಡಾ ವಸತಿ ನಿಯಲಯಗಳು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿವೆ.
ರಾಜ್ಯಮಟ್ಟದಲ್ಲಿ ಸ್ಪರ್ದಿಸಬೇಕಾದರೇ ಜಿಲ್ಲಾಮಟ್ಟದಲ್ಲಿ ಕ್ರೀಡಾಕೂಟ ಸಂಘಟಿಸಬೇಕೆಂದು ಸಾರ್ವಜನೀಕ ಶಿಕ್ಷಣ ಇಲಾಖೆಯವರು ಹೇಳುತ್ತಾರೆ ಅದರಂತೆ ಬಾಗಲಕೋಟೆ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಮಟ್ಟದ ಪಂದ್ಯಾವಳಿ ಆಯೋಜಿಸಿ ಆಯ್ಕೆಯನ್ನು ಮಾಡಲಾಗಿದೆ.
ಈ ಪಂದ್ಯಾವಳಿಯಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ದಿಸಿ ಗೆದ್ದವರು ಜನವರಿ ತಿಂಗಳಿನಲ್ಲಿ ದಿ.9 ರಿಂದ 20ರ ವರೆಗೆ ಪೂನಾದಲ್ಲಿ ನಡೆಯಲಿರುವ ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದರೇ ವಿಶ್ವ ಮಟ್ಟದ ಶಾಲಾ ಕುಸ್ತಿಯಲ್ಲಿ ಸ್ಪರ್ದಿಸಬಹುದು. ಅಲ್ಲದೇ ಖೇಲೋ ಇಂಡಿಯಾದಡಿ ಒಂದು ವರ್ಷಕ್ಕೆ 5 ಲಕ್ಷ ರೂ. ಕ್ರೀಡಾವೇತನ ಕೂಡ ದೊರೆಯಲಿದೆ ಆದರೇ ಇವೆಲ್ಲ ಅವಕಾಶದಿಂದ ಮಹಿಳಾ ಕ್ರೀಡಾಪಟುಗಳನ್ನು ವಂಚಿತರನ್ನಾಗಿ ಮಾಡುತ್ತಿರುವುದು ಮಾತ್ರ ದೌರ್ಭಾಗ್ಯವೇ ಸರಿ.
ಈ ಕ್ರೀಡಾಕೂಟಗಳಲ್ಲಿ ಈ ಹಿಂದೆ ಭಾಗವಹಿಸಿದ ಲೀನಾ ಸಿದ್ದಿ, ಮಮತಾ ಕೆಳೋಜಿ, ಜ್ಯೋತಿ ಘಾಡಿ, ಐಶ್ವರ್ಯ ದಳವಿ, ಪ್ರೇಮಾ ಹುಚ್ಚನ್ನವರ ಇನ್ನೂ ಅನೇಕರು ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆಗೈದು ರಾಜ್ಯ ಸರ್ಕಾರದಿಂದ ಗೌರವ ಸನ್ಮಾನಗಳಿಗೂ ಪಾತ್ರವಾಗಿದ್ದನ್ನು ಇಲಾಖೆಯವರು ಮರೆಯಬಾರದು ಎನ್ನುವುದು ಕುಸ್ತಿಪಟುವಿನ ತಂದೆ ರಮೇಶ ಸುತಾರ ಮಾತಾಗಿದೆ.
ಸಾರ್ವಜನೀಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನಿಶ ಅವರನ್ನು ದೂರವಾಣ ಮೂಲಕ ಸಂಪರ್ಕಿಸಿ ಆಗಿರುವ ಸಮಸ್ಯೆಯ ಕುರಿತು ವಿವರಿಸಿದರೇ ಅವರು ಶಿಕ್ಷಣ ಇಲಾಖೆಯ ಆಯುಕ್ತರಾದ ಜಾಫರ ಅವರನ್ನು ಸಂಪರ್ಕಿಸಿ ಆಗಿರುವ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಿದರು.
ಇನ್ನೂ ಆಯುಕ್ತರಾದ ಜಾಫರ ಅವರನ್ನು ಸಂಪರ್ಕಿಸಿದರೇ ಅವರು ಯಾವುದೇ ಜಿಲ್ಲೆಯಿಂದ 14 ವರ್ಷದೊಳಗಿನ ಬಾಲಕಿಯರ ಕುಸ್ತಿ ಪಂದ್ಯಾವಳಿಗೆ ಅವಕಾಶ ಕೊರಿ ಪ್ರಸ್ತಾವನೆ ಸಲ್ಲಿಸಿಲ್ಲ, ಮಾತ್ರವಲ್ಲದೇ ಈ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ದೈಹಿಕ ಶಿಕ್ಷಣ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿಲ್ಲವಾದ ಕಾರಣ ಹಾಗೂ ಜಿಲ್ಲಾಮಟ್ಟದಲ್ಲಿ ಕ್ರೀಡಾಕೂಟ ಆಯೋಜನೆ ಮಾಡದೆ ಇರುವುದರಿಂದ ರಾಜ್ಯಮಟ್ಟದಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಹೀಗಾಗಿ ಮುಂದಿನ ವರ್ಷ ಅವರಿಗೆ ಪ್ರಾಶಸ್ತ್ಯ ನೀಡುತ್ತೇವೆಂದು ತಿಳಿಸಿದ್ದಾರೆ.
ಮಾಜಿ ಅಂತರಾಷ್ಟ್ರೀಯ ಕುಸ್ತಿಪಟು, ಕರ್ನಾಟಕ ರಾಜ್ಯ ಭಾರತಿಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷರಾದ ರತನಕುಮಾರ ಮಠಪತಿಯವರನ್ನು ಸಂಪರ್ಕಿಸಿದಾಗ ಮಕ್ಕಳಿಗೆ ಈ ರೀತಿಯ ಅನ್ಯಾಯ ಆಗಬಾರದಿತ್ತು. ಅಧಿಕಾರಿಗಳ ನೀರ್ಲಕ್ಷ್ಯದಿಂದ ಹಾಗೂ ಸಭೆಯಲ್ಲಿ ಪ್ರಸ್ತಾವನೆ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ಎಷ್ಟು ಸರಿ ?.
ಖೆಲೋ ಇಂಡಿಯಾದಲ್ಲಿ ಕುಸ್ತಿ ಪ್ರತಿಭೆಯನ್ನು ಗುರುತಿಸುವ ಕಮಿಟಿಯಲ್ಲಿ ತಾವು ಸದಸ್ಯನಾಗಿದ್ದು 14 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿಭೆ ಹೆಚ್ಚಾಗಿರುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿ ಬಂದಿರುವ ತಮಗೆ ಕರ್ನಾಟಕದಲ್ಲಿ 14 ವರ್ಷದೊಳಗಿನ ಬಾಲಕಿಯರಿಗೆ ಅವಕಾಶ ವಂಚಿತರನ್ನಾಗಿ ಮಡುತ್ತಿರುವುದು ಕೇಳಿ ಬೇಸರ ತಂದಿದೆ ಎಂದ ಮಠಪತಿ ಮಹಿಳಾ ಕ್ರೀಡಾಪಟುಗಳಿಗೆ ಬೆಳೆಯಲು ಅವಕಾಶ ನೀಡಬೇಕು. ಮೇಲಾಧಿಕಾರಿಗಳು ಮನಸ್ಸು ಮಾಡಿದರೇ ಈಗಲೂ ಪ್ರತಿಭೆಗಳಿಗೆ ಸ್ಪರ್ದಿಸಲು ಅವಕಾಶವಿದೆ ಎಂದರು.
ಒಟ್ಟಾರೆ ಮಹಿಳಾ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕಾದರೇ ಇರುವ ಅವಕಾಶಗಳನ್ನು ಅವರಿಗೆ ಒದಗಿಸಿಕೊಡಿ ಎನ್ನುವುದು ಎಲ್ಲರ ಮದಾಳದ ಅಶಯವಾಗಿದ್ದು ದಿ.23ರಿಂದ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಮೇಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯವರು ಮನಸ್ಸು ಮಾಡಿ 14 ವರ್ಷದೊಳಗಿನ ಯುವ ಮಹಿಳಾ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಿದ್ದಾರೆಯೇ ಕಾದು ನೊಡಬೇಕಿದೆ.
Leave a Comment