ಹಳಿಯಾಳ:- ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಕಾಣಬಹುದು ಅಲ್ಲದೇ ಕಠಿಣ ಪರಿಶ್ರಮ ಇದ್ದರೇ ಮಾತ್ರ ನೀಜವಾದ ಬದುಕಿನ ಬೆಲೆ ಗೊತ್ತಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಹಳಿಯಾಳ ಪಟ್ಟಣದ ಶಿವಾಜಿ ವೃತ್ತದ ಸನಿಹದ ಟೋಸುರ ಟವರ್ ಸಂಕೀರ್ಣದಲ್ಲಿರುವ ಪಂಡಿತ ದಿನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ(ಆರ್ವೈಇ ಸ್ಕೀಲ್ ಸೆಂಟರ್) ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಯುವ ಸಮುದಾಯದವರು ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕು ಹಾಗೂ ಕೌಶಲ್ಯ ಅಭಿವೃದ್ದಿ ಕೇಂದ್ರಗಳ ಸದುಪಯೋಗ ಪಡೆದು ಜೀವನದಲ್ಲಿ ಯಶಸ್ಸು ಗಳಿಸುವಂತೆ ಕರೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಉಚಿತ ತರಬೇತಿಗಳಿದ್ದು ಅವುಗಳ ಪ್ರಯೋಜನವನ್ನು ಯುವ ಸಮುದಾಯ ಪಡೆಯಬೇಕೆಂದರು.
ಇನ್ನೂ ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋಗಿರುವ ಗುಲಾಮರಿಗಿಂತ ಹೆಚ್ಚು ಗುಲಾಮರು ಪ್ರಸ್ತುತ ಸಮಾಜದಲ್ಲಿ ಇದ್ದಾರೆ. ಆದರೇ ಯುವ ಸಮುದಾಯ ಮಾತ್ರ ಯಾರಿಗೂ ಗುಲಾಮರಾಗದೇ ಉತ್ತಮ ಗುರಿ ಹೊಂದಿ ಕಠಿಣ ಪರಿಶ್ರಮ ಪಟ್ಟು ಸ್ವಾವಲಂಬನೆಯ ಜೀವನ ಸಾಗಿಸುವಂತೆ ಕರೆ ನೀಡಿದರು.
ಕೇಂದ್ರ ಸರ್ಕಾರದಿಂದ ಹಳಿಯಾಳದ ಈ ಗ್ರಾಮೀಣ ಕೌಶಲ್ಯ ಕೇಂದ್ರಕ್ಕೆ ಹೆಚ್ಚಿನ ನೆರವು ನೀಡಿ ಗ್ರಾಮೀಣ ಮಕ್ಕಳು ಇನ್ನೂ ಅಧಿಕ ಪ್ರಮಾಣದಲ್ಲಿ ಇಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೇಂದ್ರವನ್ನು ಜೊಡಿಸಿ ಯುವಕರಿಗೆ ಉದ್ಯೋಗಾವಕಾಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಅನಂತಕುಮಾರ ಹೆಗಡೆ ಭರಸವೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಬ್ರಾಂಡಗಳ ಕಾಫಿಯನ್ನು ಸವಿದರು ಹಾಗೂ ಗ್ರಾಮೀಣ ಯುವಕ/ಯುವತಿಯರಿಗೆ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಹಳಿಯಾಳದ ಪಂಡಿತ ದಿನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ(ಆರ್ವೈಇ) ಕೇಂದ್ರದ ಸಂಚಾಲಕರಾದ ನಾರಾಯಣ ಟೋಸುರ ಅವರು ಕೇಂದ್ರದಲ್ಲಿ ನಡೆಯುತ್ತಿರುವ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡರಾದ ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳ್, ಉದಯ ಹೂಲಿ, ಶಿವಾಜಿ ನರಸಾನಿ, ಬಸವರಾಜ ಕಳಸೆಟ್ಟಿ, ವಿಲಾಸ ಯಡವಿ, ವಿಜಯ ಬೋಬಾಟಿ, ಸಂಸ್ಥೆಯ ರಾಘವೇಂದ್ರ ಸಾಂಬ್ರೇಕರ, ಸರಿತಾ ಟೊಸುರ, ಸುನೀಲ್ ಜಿಕೆ, ಸುರೇಶ ಗೊಂಡ ಮೊದಲಾದವರು ಇದ್ದರು.
Leave a Comment