ಹೊನ್ನಾವರದಲ್ಲಿ ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯ ಅವಾಂತರ ಜನರ ನೆಮ್ಮದಿ ಕೆಡಿಸುತ್ತಿದ್ದು ಇದರಿಂದ ರೋಸಿ ಹೊದ ಜನತೆ ಪಟ್ಟಣಪಂಚಾಯತಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಮನವಿಯೊಂದಿಗೆ ಒಂದುವಾರದ ಗಡುವನ್ನು ನೀಡಿ ವಾಪಸ್ಸಾಗಿದ್ದಾರೆ.
ರಿಕ್ಷಾ ಟೆಂಪೂ ಯೂನಿಯನ್ ತಾಲೂಕಿನ ತಜೀಂ ಸಂಘಟನೆ ಸದಸ್ಯರು ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿ ಆಕ್ರೂಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕಛೇರಿಗೆ ಬರಲು ವಿಳಂಬವಾಗಿರುದಕ್ಕೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪ್ರಮುಖ ಮಾರ್ಗದ ರಸ್ತೆಗಳನ್ನೆಲ್ಲ ಅಗೆದು ನಾನಾಚಾರ ಮಾಡಿರುವ ಗುತ್ತಿಗೆದಾರರು ತಮ್ಮ ಮನಸ್ಸಿಗೆ ತೋಚಿದಂತೆ ಕೆಲಸಮಾಡುತ್ತಿದ್ದಾರೆನ್ನುವ ಆರೋಪ ಇಂದು ನಿನ್ನೆಯದಲ್ಲದಿದ್ದರೂ ಇದನ್ನು ಪ್ರಶ್ನಿಸಿದವರಿಗೆ ಒಂದಲ್ಲ ಒಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಶಾಸಕರಲ್ಲಿಯೂ ಜನರು ದೂರಿಕೊಂಡಿದ್ದರು.
ಹತ್ತು ಹಲವಾರು ಮನವಿ ಸಲ್ಲಿಕೆಯ ಜೊತೆಗೆ ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಸಭೆ ಸೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮುಖಾ ಮುಖಿ ಚರ್ಚೆಯೂ ನಡೆದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಶಾಸಕರು ಸಂಬಂಧಪಟ್ಟವರಿಗೆ ಸೂಚಿಸಿದ್ದರು ಅಂತೂ ಇಂದು ಸಮಸ್ಯೆ ಬಗೆಹರಿಯಿತು ಎಂದುಕೊಂಡಿದ್ದ ನಗರದ ನಿವಾಸಿಗಳ ನಿರೀಕ್ಷೆ ಹುಸಿಯಾಗಿದ್ದು ಗುತ್ತಿಗೆದಾರರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ಕಂಡುಬಂದಿದೆ.
ಸಾರಿಗೆ ಬಸ್ಸು, ಪ್ರಯಾಣಿಕರ ಟೆಂಪೋ ನಿಲ್ದಾಣಕ್ಕೆ ಮರಳುವ ಮಾರ್ಗವಾದ ಕೋರ್ಟ ರಸ್ತೆಯನ್ನು ಕೆಲದಿನಗಳ ಹಿಂದೆ ಅಗೆದು ಹೊಂಡ ಗುಂಡಿಗಳನ್ನು ನಿರ್ಮಿಸಿದ್ದಾರೆ ಇದರಿಂದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳಿಗೆ, ಕೋರ್ಟಗೆ ಬರುವವರಿಗೆ, ತೋಟಗಾರಿಕೆ ಇಲಾಖೆಗೆ ಬರುವ ರೈತರಿಗೆ, ಪಕ್ಕದಲ್ಲಿರುವ ಶಾಲೆಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಸಂಕಟವನ್ನು ತಂದಿಟ್ಟಿದ್ದು ಯಾವಾಗ ಮುಗಿಯುತ್ತದೆ ಎಂದು ಕೊಳ್ಳುತ್ತಿದ್ದಾರೆ.
ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ ಪಟ್ಟಣದಲ್ಲಿ ಸಂಚರಿಸುವ ಆಟೋ ರಿಕ್ಷಾ ಚಾಲಕರಿಗೂ ಸವಾಲಾಗಿರುವ ರಸ್ತೆಯನ್ನು ಪಟ್ಟಣಪಂಚಾಯತನವರು ಮುತುವರ್ಜಿವಹಿಸಿ ತಕ್ಷಣ ಸರಿಪಡಿಸಬೇಕು ಇಲ್ಲವಾದರೆ ಸಂಬಂಧಪಟ್ಟ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿ ಒಂದೋ ಜನರಿಗೆ ತೊಂದರೆಯಾಗದರೀತಿಯಲ್ಲಿ ಕೆಲಸಮಾಡಿ ಇಲ್ಲವೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಎಂದು ಖಡಕ್ಕಾಗಿ ಸೂಚನೆ ನೀಡುವಂತೆ ಆಗಮಿಸಿದ ರಿಕ್ಷಾ ಹಾಗೂ ಟೆಂಪೋ ಚಾಲಕರು, ತಂಝೀಂ ಸೊಸೈಟಿಯ ಸದಸ್ಯರು ಹಾಗೂ ನಾಗರೀಕರು ಒತ್ತಾಯ ಮಾಡಿದರು.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ನ್ಯಾಯವಾಧಿ ವಿಕ್ರಮ ನಾಯ್ಕ, ಮಾತನಾಡಿ ಪಟ್ಟಣದಲ್ಲಿ ಕಳೆದ ಕೆಲವು ತಿಂಗಳಿನಿಂದ ಜನರು ರೋಸಿ ಹೋಗಿದ್ದಾರೆ. ನಾವು ಒಂದು ವಾರದ ಗಡುವನ್ನು ನೀಡಿ ಸರಿಪಡಿಸದಿದ್ದರೆ ಅದೇ ಸ್ಥಳದಲ್ಲಿ ದರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದೇವೆ. ಎರಡುದಿನಗಳ ಸಮಯಾವಕಾಶ ಕೇಳಿದ್ದಾರೆ ಹಾಗಾಗಿ ಇವತ್ತು ಮನವಿಯನ್ನಷ್ಟೇ ನೀಡಿದ್ದೇವೆ. ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಕಛೇರಿಗೆ ಸಮಯಕ್ಕೆ ಸರಿಯಾಗಿ ಆಗಮಿಸದೇ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಾರೆ ಮುಂದೆ ಇಂತಹ ವರ್ತನೆ ಮರುಕಲೀಸದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಆಟೋರಿಕ್ಷಾ ಚಾಲಕರು ಮಾಲಕರ ಸಂಘ ಅಧ್ಯಕ್ಷರಾದ ಶಿವರಾಜ ಮೇಸ್ತ, ತಜೀಂ ಅಧ್ಯಕ್ಷರು ಹಾಗೂ ರಿಕ್ಷಾ ಹಾಗೂ ಟೆಂಪೂ ಯೂನಿಯನ್ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment