ಹಳಿಯಾಳ:- ಪ್ರವಾಸಕ್ಕೆಂದು ಬಂದು ಗೆಳೆಯರಿಂದ ತಪ್ಪಿಸಿಕೊಂಡು ದಿಕ್ಕು ತೋಚದೆ ಕಳೆದ 8 ತಿಂಗಳಿಂದ ರಾಜ್ಯದಿಂದ ರಾಜ್ಯ-ಊರಿಂದ ಊರು ಅಲೆದಾಡುತ್ತಾ ಅಕ್ಷರಶಃ ಭೀಕ್ಷುಕನಂತೆ ಜೀವನ ಸಾಗಿಸುತ್ತಿದ್ದ ಅಪರಿಚಿತ ಯುವಕನೊರ್ವನಿಗೆ ಹಳಿಯಾಳದ ಅಂತ್ರೊಳ್ಳಿ ಗ್ರಾಮದ ಯುವಕರು ಆಸರೆಯಾಗಿ ಆತನ ಊರು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಳಿಯಾಳ-ಖಾನಾಪುರ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿಯ ಬಳಿ ವ್ಯಕ್ತಿಯೊರ್ವ ಚಿಂತಾಕ್ರಾಂತನಾಗಿ ಕುಳಿತಿದ್ದನ್ನು ಕಂಡ ಯುವಕರು ಆತನನ್ನು ವಿಚಾರಿಸಿದಾಗ ಯುವಕ ಆಂದ್ರಪ್ರದೇಶದವನೆಂದು ಆತ ಮುಂಬೈಗೆ ಪ್ರವಾಸಕ್ಕೆ ತೆರಳಿದಾಗ ಗೆಳೆಯರಿಂದ ತಪ್ಪಿಸಿಕೊಂಡಿದ್ದನೆಂದು ಬಳಿಕ ಅಲ್ಲಿ ಇಲ್ಲಿ ಅಲೆದಾಡುತ್ತಾ ಇಲ್ಲಿಗೆ ಆಗಮಿಸಿದ್ದಾನೆಂದು ಯುವಕರು ಮಾಹಿತಿ ಪಡೆದರು.
ಗೆಳೆಯರಿಂದ ತಪ್ಪಿಸಿಕೊಂಡ:- ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರನ ಶಿವಾಜಿ ನಗರದ ನಿವಾಸಿ ಗಣೇಶ ರೆಡ್ಡಪ್ಪಾ ಮಧು(19) ಎನ್ನುವವನಾಗಿದ್ದು. ಈತ ಹೇಳುವಂತೆ ಕಳೆದ 8 ತಿಂಗಳ ಹಿಂದೆ ಗೆಳೆಯರೊಡನೆ ಮುಂಬೈಗೆ ಪ್ರವಾಸಕ್ಕೆ ತೆರಳಿದಾಗ ಅದ್ಹೆಗೋ ಅವರಿಂದ ತಪ್ಪಿಸಿಕೊಂಡಿದ್ದನಂತೆ ಭಾಷೆಯ ಸಮಸ್ಯೆಯಿಂದ ಯಾರ ಸಹಾಯವು ದೊರೆಯದೆ 2 ತಿಂಗಳು ಸಿಕ್ಕಿದ್ದನ್ನು ತಿನ್ನುತ್ತ ರಸ್ತೆ ಬದಿ ಜೀವನ ಸಾಗಿಸಿದ್ದಾನೆ. ನಡೆಯುತ್ತಾ ಸಾಗಿ ನಾಸಿಕಗೆ ಬಂದು ತಲುಪಿದ್ದಾನೆ ಅಲ್ಲಿ ತಿಂಗಳು ಕಾಲ ಜೀವನ ಸಾಗಿಸಿದ್ದಾನೆ.
ಊರುರು ಅಲೆದ :- ಇಲ್ಲಿ ಆಂಧ್ರಪ್ರದೇಶದ ಲಾರಿಯವನೊಬ್ಬ ಆತನನ್ನು ತನ್ನ ಲಾರಿಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಗೆ ತಂದು ಬಿಟ್ಟಿದ್ದಾನೆ ಮತ್ತೇ ಅದೇ ರೀತಿ ತಿಂಗಳುಗಳ ಕಾಲ ಸಿಕ್ಕಿದ್ದನ್ನು ತಿನ್ನುತ್ತ ಜೀವನ ಸಾಗಿಸಿ ನಡೆಯುತ್ತಾ ಸಾಗಿದ್ದು ಖಾನಾಪುರ ಹಳಿಯಾಳ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿ ಬಳಿ ಬಂದು ಕುಳಿತಿದ್ದಾನೆ.
ಯುವಕನ ರಕ್ಷಿಸಿ ಮಾನವೀಯತೆ ಮೆರೆದರು:- ಇತನ ಅವಸ್ಥೆಯನ್ನು ಕಂಡ ಅಲ್ಲಿಯೇ ಇದ್ದ ಅಂತ್ರೊಳ್ಳಿ ಗ್ರಾಮದ ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀನಿವಾಸ ಉಪ್ಪಾರ, ಯುವಕರಾದ ಶಾಬುದ್ದಿನ್ ಡೊನಸಾಲೆ, ಮಹೇಶ ವಡ್ಡರ ಮಂಜುನಾಥ ಉಪ್ಪಾರ ಹಾಗೂ ನಾರಾಯಣ ಹಂಚಿನಮನಿ ಇತನನ್ನು ವಿಚಾರಿಸಿದ್ದು ಆತನ ಕರುಣಾಜನಕ ಸ್ಥಿತಿಯನ್ನು ಅರಿತ ಯುವಕರು ಕೂಡಲೇ ಆತನಿಗೆ ಸ್ನಾನ ಮಾಡಿಸಿ ತಿನ್ನಲು ಅನ್ನ- ನೀರು ಕೊಟ್ಟು. ಬಟ್ಟೆ ತೊಡಿಸಿದ್ದಾರೆ. ಅಲ್ಲದೇ 1500ರೂ ಸಂಗ್ರಹಿಸಿ ಅಳ್ನಾವರ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು ಆಂಧ್ರಪ್ರದೇಶಕ್ಕೆ ತೆರಳುವ ತಿರುಪತಿ ರೈಲನ್ನು ಹತ್ತಿಸಿ ಊರಿಗೆ ತೆರಳುವಂತೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಗಣೇಶ ಈಗಾಗಲೇ ಆಂಧ್ರಪ್ರದೇಶದ ಪಲಮನೇರಗೆ ತಲುಪಿದ್ದು ಮನೆಗೆ ತೆರಳುತ್ತಿರುವುದಾಗಿ ಕರೆ ಮಾಡಿ ಹೇಳಿದ್ದಾನೆಂದು ಗ್ಥಹ ರಕ್ಷಕ ದಳದ ಸಿಬ್ಬಂದಿಯೂ ಆಗಿರುವ ಶ್ರೀನಿವಾಸ ಉಪ್ಪಾರ ತಿಳಿಸಿದ್ದಾರೆ.
ಯುವಕರ ಕಾರ್ಯಕ್ಕೆ ಪ್ರಶಂಸೆ:– ತನ್ನವರಿಂದ ಬೆರೆಯಾಗಿ ಭಾಷಾ ಸಮಸ್ಯೆಯಿಂದ ತನ್ನ ಊರಿಗೂ ತಲುಪಲಾಗದೆ – ದಿಕ್ಕುತೊಚದೆ ಪರದೆಸಿಯಾಗಿ ಅಲೆದು ಭಿಕ್ಷುಕನಾಗಿ ಜೀವನ ಸಾಗಿಸುತ್ತಿದ್ದ ಯುವಕನೊರ್ವನನ್ನು ರಕ್ಷಿಸಿ ಮತ್ತೇ ಆತ ತನ್ನ ಊರು ತಲುಪುವಂತೆ ಮಾಡಿದ ಮಾನವೀಯತೆ ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಕೇಳಿಬರುತ್ತಿದೆ.
Leave a Comment