ಹೊನ್ನಾವರ:ತಾಲೂಕಿನ ಶಿರೂರು ಹಬ್ಬಾನಹಸಿಗೆಯಲ್ಲಿ 2013-14 ರಲ್ಲಿ `ಕಿರು ನೀರು ಸರಬರಾಜು ಯೋಜನೆ’ಯಡಿಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್ ಮತ್ತು ನಿರ್ವಹಣೆ ಇಲ್ಲದೆ ಟ್ಯಾಂಕ್ನ ಸಲಕರಣೆಗಳು ಹಾಳಾಗಿದ್ದು ಶುದ್ದ ಕುಡಿಯುವ ನೀರಿನ ಘಟಕ ಹಳ್ಳ ಹಿಡಿದಿದೆ.
ಇಲ್ಲಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ `ಕಿರು ನೀರು ಸರಬರಾಜು ಯೋಜನೆ’ ನಿರ್ಮಾಣವಾಗಿದ್ದು, 5 ವರ್ಷವಾದರೂ ಇನ್ನೂ ತನಕ ಆ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಫಲಪ್ರದವಾಗಲಿಲ್ಲ.
ತಾಲೂಕಿನ ಶಿರೂರು ಗ್ರಾಮದ ಹೂವಿನಹಿತ್ಲ, ಹೆಬ್ಬಾನಹಸಿಗೆ, ಹಳ್ಳಿಮೂಲೆ, ಕಣಿವೆ ಕ್ರಾಸ್, ಕಲ್ಲ ಹಳ್ಳಿ, ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಸರ್ಕಾರಿ ಪ್ರಾಥಮಿಕ ಶಾಲೆ, ಹಾಗೂ ಕಾಸನಮನೆ ಹಳ್ಳ ಸೇರಿದಂತೆ ಒಟ್ಟೂ 9 ಗಲ್ಲಿಗಳಿಗೆ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಈವರೆಗೂ ಯಾವುದೇ ನೀರಿನ ಟ್ಯಾಂಕ್ಗಳಿಗೆ ನೀರು ಪೂರೈಕೆಯಾಗುತ್ತಿಲ್ಲ.
ಹೀಗಾಗಿ ಆ ಗ್ರಾಮಗಳ ನಿವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸುಮಾರು 300 ಕುಟುಂಬಗಳನ್ನು ಹೊಂದಿರುವ ಇಲ್ಲಿಯ ಪ್ರದೇಶದ ಜನರು ಕುಡಿಯುವ ನೀರಿಗಾಗಿ ಹಾತೊರೆಯುತ್ತಿದ್ದಾರೆ.
2013-14ನೇ ಸಾಲಿನಲ್ಲಿ ಯೋಜನೆ ಆರಂಭ: 2013-14ನೇ ಸಾಲಿನಲ್ಲಿ ಯೋಜನೆ ಆರಂಭವಾಗಿದ್ದು, ಅಲ್ಲಿನ ಬಹುಪಾಲು ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರಿನ ಪೂರೈಕೆಯಾಗಿಲ್ಲ. ಯೋಜನೆ ಆರಂಭವಾದ 6 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಂಡು ಸಂಬಂಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಸ್ತಾಂತರಿಸಬೇಕೆಂಬ ನಿಯಮ ಇದೆ. ಆದರೆ ಕಾಮಗಾರಿ ಪೂರ್ಣಗೊಳಿಸದೆ ಆಗೊಮ್ಮೆ-ಈಗೊಮ್ಮೆ ಎಂದುಕೊಂಡು 5 ವರ್ಷ ಕಾಲಹರಣ ಮಾಡಿ ನೀರು ಬಡದೆ ಸತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆ ಭಾಗದ ಅನೇಕ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸುವಂತೆ ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಹೀಗಾಗಿ 2013ರಲ್ಲಿ ಕಿರು ನೀರು ಸರಬರಾಜು ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಶಿರೂರಿನ ಹೆಬ್ಬನಹಸಿಗೆಯಲ್ಲಿ ತೆರವೆ ಬಾವಿ, ಟ್ಯಾಂಕ್ ನಿರ್ಮಿಸಿ ಅದಕ್ಕೆ ಪೈಪ್ಲೈನ್ ಅಳವಡಿಸಲಾಗಿತ್ತು. ಆದರೆ 4 ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದೆ ಇರುವುದರಿಂದ ಪೈಪ್ಲೈನ್ಗಳು ಕಿತ್ತುಹೋಗಿದ್ದು, ಸಂಬಂಧಪಟ್ಟ 9 ಟಾಕಿಗಳಿಗೆ ನೀರು ಪೂರೈಕೆಯಾಗಿಲ್ಲ. ಈ ಬಾರಿ ಬಾವಿಗೆ ಪಂಪ್ ಅಳವಡಿಸಿದ್ದು, ಸರಬರಾಜು ಪ್ರಕ್ರಿಯೆಗೆ ಚಾಲನೆ ನೀಡಿಲ್ಲ. ನೀರಿನ ಟ್ಯಾಂಕ್ಗಳಿಗೆ ನೀರು ಸರಬರಾಜಾಗುತ್ತಿಲ್ಲ. ಇದರಿಂದಾಗಿ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಪಡೆಯಲಾಗದೆ ಜನರು ಹೈರಾಣಾಗಿದ್ದಾರೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ಅಕ್ಕಪಕ್ಕದ ಬಾವಿಗೆ ಹೋಗಿ ಬಳಕೆಗೆ ನೀರು ತರುತ್ತಿದ್ದಾರೆ.
ವಾಟರ್ ಮೆನ್ ನೇಮಿಸಿಲ್ಲ: ಇಷ್ಟು ವರ್ಷ ಕಳೆದರೂ ಶಿರೂರು ಭಾಗಕ್ಕೆ ನೀರಿನ ಸರಬರಾಜು ಮಾಡುವವರನ್ನು ನೇಮಕ ಮಾಡಿಲ್ಲ. ಯಾವ ಭಾಗಕ್ಕೆ ನೀರಿನ ಅವಶ್ಯಕತೆ ಇದೆ ಎಂಬುದನ್ನು ವಿಚಾರಿಸಲು ಮತ್ತು ಜನರಿಗೆ ಅಗತ್ಯವಿರುವ ಸ್ಥಳಗಳಿಗೆ ನೀರಿನ ಪೂರೈಕೆ ಮಾಡಲು ಯಾರೊಬ್ಬರನ್ನೂ ನೇಮಿಸದೇ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
———————–
“ಕಳೆದ 5 ವರ್ಷದ ಹಿಂದೆ ನಿರ್ಮಾಣವಾದ ಕಾಮಗಾರಿ ಇನ್ನೂ ಸಹ ಪೂರ್ಣಗೊಂಡಿಲ್ಲ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ನಮ್ಮ ಭಾಗದ ಜನರು ಗಂಭೀರ ಸ್ವರೂಪದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. 7 ಟ್ಯಾಂಕ್ಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಯಾವ ಟ್ಯಾಂಕ್ಗಳಿಗೂ ನೀರಿನ ಪೂರೈಕೆಯಾಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು”-ಸಂದೀಪ ನಾಯ್ಕ, ಶಿರೂರು ಗ್ರಾಮಸ್ಥ.
———————–
“ಶಿರೂರು ಭಾಗದಲ್ಲಿ ನಿರ್ಮಾಣವಾದ `ಕಿರು ನೀರು ಸರಬರಾಜು ಯೋಜನೆ’ ಪೂರ್ಣಗೊಂಡರೂ ಜನರಿಗೆ ನೀರಿನ ಪೂರೈಕೆಯಾಗದಿರುವುದು ತಿಳಿದಿದೆ. ಯೋಜನೆಯನ್ನು ಈಗಾಗಲೇ ಚಂದಾವರ ಗ್ರಾಪಂ ಗೆ ಹಸ್ತಾಂತರಿಸಲಾಗಿದ್ದು, 2 ದಿನದೊಳಗಾಗಿ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.”-ಪಟ್ಟಣ ಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್.
—————————————-
Leave a Comment