ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿಯ ಸಹಭಾಗಿತ್ವದಲ್ಲಿ ರಂದು “ವಿಶ್ವ ಪರಿಸರ ದಿನಾಚರಣೆ” ಆಚರಿಸಲಾಯಿತು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಟ್ರಸ್ಟ್ವತಿಯಿಂದ ಉಚಿತವಾಗಿ ಪಟ್ಟಿ ವಿತರಣೆ ಮಾಡಲಾಯಿತು.
ಅತಿಥಿಗಳಾಗಿ ಆಗಮಿಸಿದ ಸೇತುಬಂಧ ಟ್ರಸ್ಟ್ ಕರ್ಕಿಯ ಎನ್.ಜಿ.ಹೆಗಡೆ ಮಾದಪ್ಪನ್ ಅವರು ಮಾತನಾಡಿ ಇಂಗ್ಲೀಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ. ಕಾರ್ಬನ್ ಡೈ ಆಕ್ಸೆಡ್ ಪ್ರಮಾಣ ಏರುತ್ತಿರುವುದರಿಂದ ತಾಪಮಾನ ಏರಿಕೆಯಾಗುತ್ತಿದೆ. ಪ್ಲಾಸ್ಟಿಕ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಪರಿಸರವನ್ನು ಉಳಿಸಬೇಕು ಎಂದರು.
ಇನ್ನೋರ್ವ ಅತಿಥಿಗಳಾದ ನಾಗರಾಜ ನಾಯಕ್-ಖ್ಯಾತ ನ್ಯಾಯವಾದಿಗಳು, ಕಾರವಾರ ಇವರು ಮಾತನಾಡಿ ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ಅದು ನಿತ್ಯವೂ ಆಚರಣೆಯಲ್ಲಿ ಇರಬೇಕಾದುದು. ಮನುಷ್ಯನಿಲ್ಲದ ಪ್ರಕೃತಿ ಸಮೃದ್ಧಿಯಿಂದ ಕೂಡಿರುತ್ತಿತ್ತು. ಶಂಕರ ಹೊಂಡದಲ್ಲಿ ಜನಿಸಿದ ಅಘನಾಶಿನಿ ಸಹಸ್ರ ಜನರಿಗೆ ಉದ್ಯೋಗ ಆಶ್ರಯ ನೀಡಿದ ಪ್ರಾಣದಾಯಿನಿ, ಅಂತಹ ನದಿ ಇಂದು ಬತ್ತಿ ಹೋಗುತ್ತಿದೆ. ಆದ್ದರಿಂದ ಜಲವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಹೇಳಿದರು. ಒಂದು ಬಾಟಲ್ ತಯಾರಿಸಲು ನಾಲ್ಕು ಲೀಟರ್ ನೀರು ಬೇಕು, ಆದ್ದರಿಂದ ಪ್ಲಾಸ್ಟಿಕ್ ಬಾಟಲ್ ಸಂಸ್ಕøತಿ ನಮ್ಮದಾಗಬಾರದು ಎಂದು ತಿಳಿಸಿದರು. ನಾವು ಬಳಸುವ ವಸ್ತುಗಳು ಹಾಳಾದರೆ ಅವುಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದು ಜನರಿಗೆ ತಿಳಿದಿಲ್ಲ. ಆದ್ದರಿಂದ ಪಂಚ ಭೂತಗಳಲ್ಲಿ ಲೀನವಾಗುವ ವಸ್ತುಗಳನ್ನು ಹೆಚ್ಚು ಬಳಸಬೇಕು ಎಂದು ಹೇಳಿ “ಒಂದು ನದಿ ಭತ್ತಿದರೆ ಸಾವಿರಾರು ತಾಯಿ ಮಡಿದಷ್ಟು ದುಃಖವಾಗುತ್ತದೆ” ಎಂದು ಮಾರ್ಮಿಕವಾಗಿ ಮಾತನಾಡಿ ಪರಿಸರ ಉಳಿಸಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ ಊರಿನಲ್ಲೇ ಇದ್ದು ಊರನ್ನು ಅಭಿವೃದ್ದಿಪಡಿಸಿ ಸ್ವಾವಲಂಬಿಯಾಗಿ ಬದುಕಬೇಕು. ಸಹ್ಯಾದ್ರಿಯ ತಲೆದಿಂಬು, ಕಡಲಿನ ಜೋಗುಳ, ಹಸಿರುಬಣ್ಣದ ಕೌದಿಯನ್ನು ಹೊದ್ದ ಉತ್ತರ ಕನ್ನಡದ ಹಸಿರನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಾಥಾ ತೆರಳಿ ಪರಿಸರ ಉಳಿವಿನ ಘೋಷಣೆಯ ಉದ್ಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಶ್ರೀಕಾಂತ ಹಿಟ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸೀಮಾ ಭಟ್ಟ ವಂದಿಸಿದರು. ಕೆ.ಎಸ್.ಭಟ್ಟ. ಜಿ.ಎಚ್.ನಾಯ್ಕ ಸುಬ್ರಾಯ ಭಟ್ಟ ಉಪಸ್ಥಿತಿಯಲ್ಲಿದ್ದರು.
Leave a Comment