ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದಲ್ಲಿ ದಿ. 22 ರಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. 12 ದಿನಗಳ ಕಾಲ “ಕೃಷಿ ಮಾಹಿತಿ ರಥ” ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ತಿಳಿಸಿದರು.
ಪಟ್ಟಣದ ಕೃಷಿ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದಿ.22 ರಂದು ಪ್ರಾರಂಭವಾಗಿ ಜುಲೈ 3ರ ವರೆಗೆ ನಡೆಯಲಿರುವ ಈ ಅಭಿಯಾನವು ತಾಲೂಕಿನ 4 ದಾಂಡೇಲಿ, ಹಳಿಯಾಳ, ಸಾಂಬ್ರಾಣಿ ಮತ್ತು ಮುರ್ಕವಾಡ ಹೋಬಳಿಗಳಲ್ಲಿ ಪ್ರತಿ ಹೋಬಳಿಯಲ್ಲಿ 3 ದಿನಗಳ ಕಾಲ ಅಂದರೇ ಒಟ್ಟೂ 12 ದಿನಗಳ ಕಾಲ ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥವು ಸಂಚರಿಸಲಿದೆ ಎಂದರು.
ಅಭಿಯಾನದಲ್ಲಿ ಕೃಷಿ ಸಂಬಂಧಿತ ಇಲಾಖೆಗಳಾದ ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಭಾಗವಹಿಸಿ ರೈತರ ಸಮಸ್ಯೆಗಳು ಸೇರಿದಂತೆ ಅವರಿಗೆ ಆಧುನಿಕ ಹಾಗೂ ಸುಧಾರಿತ ಕೃಷಿ ಕುರಿತು ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಅಲ್ಲದೇ ರೈತರಿಗೆ ಕೃಷಿ ವಿಜ್ಞಾನಿಗಳಿಂದ ಉಚಿತವಾಗಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಂವಾದ ನಡೆಯಲಿದೆ ಎಂದು ನಾಗೇಶ ನಾಯ್ಕ ಮಾಹಿತಿ ನೀಡಿದರು.
ರೈತರಿಗೆ ಬೇಕಾಗುವ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಮಾಹಿತಿ, ಸಾಮಗ್ರಿಗಳ ಚಿತ್ರಣ ದೊರೆಯಲಿದೆ. ಮಳೆಯು ವಿಳಂಭವಾಗಿದ್ದರಿಂದ ಕೃಷಿ ರಥವು ಸಹ ವಿಳಂಭವಾಗಿ ಸಂಚರಿಸುತ್ತಿದೆ. ದಿ.22 ರಂದು ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ರಥಕ್ಕೆ ಹಸೀರು ನಿಶಾನೆ ತೊರಿಸಿ ಚಾಲನೆ ನೀಡಲಿದ್ದಾರೆ.
ಅಲ್ಲದೇ ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೃಷಿ ಸಾಮಗ್ರಿ, ಯಂತ್ರೋಪಕರಣಗಳನ್ನು ಹಾಗೂ ಚೆಕ್ಗಳನ್ನು ವಿತರಿಸಲಾಗುವುದು ಎಂದರು. ರೈತರಿಗೆ ಬೇಕಾಗುವ ರಸಗೊಬ್ಬರ, ಭತ್ತ, ಹತ್ತಿ, ಮೆಕ್ಕೆಜೋಳ ಮತ್ತು ಕ್ರಿಮಿನಾಶಕಗಳ ಸಂಗ್ರಹ ಇದ್ದು ರೈತರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಅಧಿಕಾರಿ ನಾಗೇಶ ನಾಯ್ಕ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಪಶು ಇಲಾಖೆಯ ನರೇಂದ್ರ ಹೆಗಡೆ, ತೋಟಗಾರಿಕೆ ಅಧಿಕಾರಿ ಎಮ್.ಎಮ್.ಮುಲ್ಲಾ, ಕೃಷಿ ಅಧಿಕಾರಿಗಳಾದ ಸುರೇಖಾ ಪಟ್ಟಣಶೆಟ್ಟಿ, ಅಕ್ಷತಾ ಹೊಸಮನಿ ಮತ್ತು ಎಮ್.ಸಿ.ಪ್ರಭಾಕರ ಇದ್ದರು.
Leave a Comment