ಹಳಿಯಾಳ:- ಕನ್ನಡವು ವಿಶ್ವದ ಶ್ರೇಷ್ಠ 20 ಭಾಷೆಗಳಲ್ಲಿ ಒಂದಾಗಿದೆ, ಭಾರತದಲ್ಲೇ ಅತೀ ಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ ಅಲ್ಲದೇ ವಿಶ್ವಗುರು ಬಸವಣ್ಣರ ಪ್ರಜಾಪ್ರಭುತ್ವ ಬ್ರಿಟಿಷ್ರೆ ಒಪ್ಪಿ ಲಂಡನ್ ಪಾರ್ಲಿಮೆಂಟ ಮುಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕನ್ನಡಕ್ಕೆ ಸಂದ ಬಹುದೊಡ್ಡ ಗೌರವವಾಗಿದೆ ಎಂದು ಹಳಿಯಾಳ ಕಾಮೇಲ್ ಪ್ರೌಢಶಾಲೆಯ ಶಿಕ್ಷಕ ಕಾಳಿದಾಸ ಬಡಿಗೇರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ದಾರ್ ವಲ್ಲಭಭಾಯಿ ಮಕ್ಕಳ ಉದ್ಯಾನವನದಲ್ಲಿ ಹಳಿಯಾಳದ ಕನ್ನಡ ಸಾಹಿತ್ಯಾಭಿಮಾನಿಗಳ ಬಳಗದಿಂದ ಏರ್ಪಡಿಸಿದ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸಕರಾಗಿ ಬಡಿಗೇರ ಮಾತನಾಡಿದರು. ಕನ್ನಡ ನಾಡು, ನುಡಿಯ ವೈಭವ ವರ್ಣಿಸಿದ ಅವರು ಕರ್ನಾಟಕ ಏಕೀಕರಣದ ಸಾಹಸ ಇತಿಹಾಸವನ್ನು ಮನದಟ್ಟು ಮಾಡಿ, ಜನರಲ್ಲಿ ಭಾಷಾಭಿಮಾನ ಬೆಳೆಯಬೇಕೆಂದರು.
ಹಿರಿಯ ನಾಗರಿಕ ಕ್ಷೇಮಾಭಿವೃದಿ ಸಂಘದ ಅಧ್ಯಕ್ಷರಾದ ಜಿ.ಡಿ.ಗಂಗಾಧರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಕಟ್ಟುವ ಜವಾಬ್ದಾರಿ ಸರ್ವ ಕನ್ನಡಿಗರ ಮೇಲಿದೆ. ವಾರದ ಒಂದು ತಾಸು ಕನ್ನಡಕ್ಕೆ ಮೀಸಲಿಡೋಣ. ಹಿರಿಯರ ಸಹಕಾರ, ಚಿಕ್ಕವರ ದುಡಿಮೆ ಕುಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಬಯಲಾಟ ಅಕಾಡೆಮಿ ಸದಸ್ಯ ಸಿದ್ದಪ್ಪಾ ಬಿರಾದಾರ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ವಿವಿಧ ಕ್ಷೇತ್ರಗಳ ಪ್ರಮುಖರಾದ ಸುರೇಂದ್ರ ಬಿರ್ಜೆ, ಶಾಂತಾರಾಮ ಚಿಬ್ಬುಲಕರ, ಸುಶೀಲಾ ಪಾಟೀಲ್, ವಿಠ್ಠಲ ಕೊರ್ವೆಕರ, ಮಹಾಂತ ದೇಸಾಯಿಸ್ವಾಮಿ, ಅರುಣ ನಾಯಕ, ಭಾರತಿ ನಲವಡೆ, ದಿನೇಶ ನಾಯ್ಕ ಮೊದಲಾದವರು ಇದ್ದರು.
Leave a Comment