ಹೊನ್ನಾವರ ತಾಲೂಕಿನ ಹಿರೇಬೈಲ್ ಆರ್ಮುಡಿಯಲ್ಲಿ ಜನಿಸಿ ಪ್ರಸ್ಥುತ ಕಡ್ಲೆ ಯಲ್ಲಿ ವಾಸವಾಗಿರುವ ದಾಮೋದರ (ದಾಮು) ನೋಡುವುದಕ್ಕೆ ವಾಮನನಾದರೂ ತನ್ನ ಪ್ರತಿಭೆಯಿಂದ ಕಲೆಯ ಬಗ್ಗೆ ತನಗಿರುವ ಆಸಕ್ತಿ ,ಹೊಸತನದ ಹಂಬಲ, ಕೆಲಸದಲ್ಲಿನ ಶೃದ್ಧೆಯಿಂದ ನಾಡಿನೆಲ್ಲೆಡೆ ಹೆಸರುಮಾಡಿ ತ್ರಿವಿಕ್ರಮನಾಗಿ ಬೆಳೆದಿದ್ದಾರೆ.
ಹೊನ್ನಾವರ ಪಟ್ಟಣದಲ್ಲಿ ರಂಗಭೂಮಿಕಾ ಎನ್ನುವ ರಂಗ ಕಲೆಗಳ ಅಭಿವ್ಯಕ್ತಿಗೆ ಅಗತ್ಯವಾದ ವೇಷ ಭೂಷಣಗಳನ್ನು ಬಾಡಿಗೆಗೆ ದೊರೆಯುವ ಮಳಿಗೆಯನ್ನ ಆರಂಭಿಸಿದ್ದಲ್ಲದೇ ಕರಾವಳಿ ಉತ್ಸವ, ಕದಂಬ ಉತ್ಸವ ಸೇರಿದಂತೆ ರಾಜ್ಯದ ಅತೀ ದೊಡ್ಡ ಉತ್ಸವ ಎನಿಸಿರುವ ಹಂಪಿ ಉತ್ಸವದ ಮೆರುಗನ್ನು ಹೆಚ್ಚಿಸುವವರೆಗೆ, ದಸರಾ ಉತ್ಸವದ ಸ್ಥಬ್ಧ ಚಿತ್ರ ನಿರ್ಮಾಣದಲ್ಲಿ ದಾಮುವಿನ ಕೈಚಳಕ, ಕ್ರಿಯಾಶೀಲತೆ ಕೆಲಸಮಾಡಿದೆ.
ನಾಟಕ ಹಾಗೂ ಸಿನೆಮಾದಲ್ಲಿ ಡಿಪ್ಲೋಮಾ ಪಡದವಿ ಪಡೆದಿರುವ ದಾಮು ಕೆಲ ವರ್ಷ ಸಿನೆಮಾ ರಂಗದಲ್ಲಿ ಕೆಲಸ ಮಾಡಿದ್ದರೂ ತನ್ನೊಳಗಿನ ಪ್ರತಿಭೆಗೆ ಇಲ್ಲಿನ ಅವಕಾಶಗಳು ಸೀಮಿತ ಎನ್ನುವುದನ್ನು ಬೇಗನೆ ಅರ್ಥಮಾಡಿಕೊಂಡು, ಮನೆಯಲ್ಲಿಯೂ ತಂದೆಗೆ ಒಬ್ಬನೇ ಮಗನಾಗಿರುವುದರಿಂದ ಮರಳಿ ಗೂಡು ಸೇರಿದೆ ಎನ್ನುವುದನ್ನು ಸ್ಮರಿಸುತ್ತಾರೆ.
ಎಲ್ಲರೂ ಸಾಗಿದ ದಾರಿಯಲ್ಲಿಯೇ ತಾನು ಸಾಗುವುದರಿಂದ ಏನೂ ಪ್ರಯೋಜನವಿಲ್ಲ. ನಾನು ಏನಾದರೂ ಹೊಸತನ್ನು ಮಾಡಬೇಕು ಎಂದುಕೊಂಡು ತಾಲೂಕಿನಲ್ಲಿ ಎಲ್ಲಿಯೂ ಇಲ್ಲದ ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳನ್ನೇ ಉದ್ದೇಶವಾಗಿಟ್ಟುಕೊಮಡು ರಂಗ ಪರಿಕರಗಳ ಬಾಡಿಗೆ ಮಳಿಗೆಯನ್ನು ಪ್ರಾರಂಭಿಸಿ ತಕ್ಕಮಟ್ಟಿಗೆ ಯಶಸ್ಸನ್ನೂ ಸಿಕ್ಕಿದೆ.
ವೇದಿಕೆಯ ಅಲಂಕಾರ, ಸ್ವಾಗತ ಕಮಾನು ಸೇರಿದಂತೆ ಉತ್ಸವಗಳ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರವಹಿಸುವ ಎಲ್ಲಾ ಅಲಂಕಾರ ಸಾಮಗ್ರಿಗಳ ಹಿಂದಿನ ಶಕ್ತಿಯಾಗಿರುವ ದಾಮೋದರ ಅದರಿಂದಲೇ ತನ್ನ ಅನ್ನವನ್ನು ಕಂಡುಕೊಂಡಿರುವಾತ. ಬದುಕು ಕಟ್ಟಿಕೊಳ್ಳುವ ಜೊತೆಗೆ ನಾಡು ಸುತ್ತುವ ಅವಕಾಶವನ್ನೂ ಪಡೆದುಕೊಂಡ ವಾಮನ ಮೂರ್ತಿಯ ತ್ರಿವಿಕ್ರಮ ಸಾಧನೆ ನಿಜ್ಕೂ ಸ್ಪೂರ್ತಿದಾಯಕ.
Leave a Comment