ಮಾರ್ಕೆಟಿಂಗ್ ಸೊಸೈಟಿ ಚುನಾವಣೆ – ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿ
ಮಾರ್ಕೆಟಿಂಗ್ ಸೊಸೈಟಿ ಚುನಾವಣೆ – ಮತ್ತೆ ಸದ್ದು ಮಾಡುತ್ತಿದೆ ಮೂರು ಸಾಮಾನ್ಯ ಸಭೆಗೆ ಹಾಜರಾಗದವರ ಅನರ್ಹತೆಯ ಸುದ್ದಿ
ಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಹೊನ್ನಾವರ ಟಿ.ಎ.ಪಿ.ಸಿ.ಎಮ್.ಎಸ್.ಲಿ ಚುನಾಚವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಹಕಾರಿ ಸಂಘಗಳ ಚುನಾವಣೆಯನ್ನು ಗೊಂದಲದ ಗೂಡಾಗಿಸಿದ್ದ ಮೂರು ಸಾಮಾನ್ಯ ಸಭೆಗೆ ಹಾಜರಾಗದ ಸದಸ್ಯರಿಗೆ ಮತದಾನದ ಅರ್ಹತೆ ಇಲ್ಲ ಎನ್ನುವ ನಿಯಮದ ಅನುಷ್ಠಾನ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.
ಭಟ್ಕಳ ತಾಲೂಕಿನ 7 ಮತ್ತು ಹೊನ್ನಾವರ ತಾಲೂಕಿನ 19 ಸಹಕಾರಿ ಸಂಘಗಳನ್ನು ತನ್ನ ಕಾರ್ಯವ್ಯಾಪ್ತಿಯಲ್ಲಿ ಹೊಂದಿರುವ ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಪ್ರಸ್ಥುತ ಗಣಪಯ್ಯ ಕೆ ಗೌಡ ಮುಗಳಿ ಇವರು ಅಧ್ಯಕ್ಷರಾಗಿದ್ದಾರೆ. ಐದು ವರ್ಷ ಅವಧಿ ಪೂರ್ಣಗೊಂಡ ಕಾರಣ ಎಪ್ರಿಲ್ 26 –2020 ಕ್ಕೆ ಚುನಾವಣೆಯೂ ನಿಗಧಿಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು.
ಮತ್ತೆ ಚುನಾವಣೆಯ ಕಾವು… ಕೊರೊನಾ ಸಂಬಂಧಿತ ಹೇರಲಾಗಿದ್ದ ಲಾಕ್ಡೌನ್ ತೆರವಾದ ನಂತರ ಜನಜೀವನವೂ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವೆ ಹಿಂದೆ ಚುನಾವಣೆ ಮುಂದೂಡಲ್ಪಟ್ಟಿದ್ದ ಸಹಕಾರಿ ಸಂಘಗಳಲ್ಲಿ ಚುನಾವಣಾ ಪ್ರಕ್ರಿಯೆ ಎಲ್ಲಿಗೆ ಸ್ಥಗಿತವಾಗಿತ್ತೋ ಅಲ್ಲಿಂದ ಮುಂದುವರಿಸುವಂತೆ ಆದೇಶವಾಗಿದ್ದು ಚುನಾವಣಾ ಪ್ರಕ್ರಿಯೆ ಗರಿಗೆದರಿದೆ. ಆದರೆ ಮೂರು ಸಮಾನ್ಯ ಸಭೆಗಳಿಗೆ ಹಾಜರಾಗದವರು ಮತದಾನಕ್ಕೆ ಅರ್ಹರಲ್ಲ ಎನ್ನುವ ನಿಯಮ ಮತ್ತೆ ಹಲವು ಆಕಾಂಕ್ಷಿಗಳ ನಿದ್ದೆಗೆಡಿಸಿದೆ.
ಕನಿಷ್ಠ ಮೂರು ಸಾಮಾನ್ಯ ಸಭೆಗೆ ಹಾಜರಾಗಿಲ್ಲ ಎನ್ನುವ ಕಾರಣಕ್ಕೆ ಮತದಾನಕ್ಕೆ ಅವಕಾಶ ಇಲ್ಲ ಎನ್ನಲಾಗಿದ್ದ 12 ಸಹಕಾರಿ ಸಂಘಗಳವರು ಈ ಬಗ್ಗೆ ಆಕ್ಷೇಪಣೆ ಎತ್ತಿದ್ದರು. ಆಕ್ಷೇಪಣೆ ಸಲ್ಲಿಸಿದ್ದ 12 ಸಹಕಾರಿ ಸಂಘದ ಕಾರ್ಯದರ್ಶಿಗಳನ್ನು ಹಾಗೂ ಮಾಕರ್ಟೆಟಿಂಗ್ ಸೊಸೈಟಿ ಕಾರ್ಯದರ್ಶಿಯವರನ್ನು ದಿನಾಂಕ 24-09-2020 ರಂದು ಸಹಾಯಕ ನಿಬಂಧಕರು ಕುಮಟಾ ಇವರು ವಿಚಾರಣೆಗೆ ಕರೆಸಿಕೊಂಡಿದ್ದರು. ತಾತ್ಕಾಲಿಕ ಪಟ್ಟಿ ತಯಾರಿಸುವಾಗ ಕಾರಣ ಬರೆದಿಲ್ಲ ಎನ್ನುವುದನ್ನು ಎತ್ತಿಹಿಡಿದು 12 ಮಂದಿಗೂ ಮತದಾನದ ಹಕ್ಕನ್ನು ನೀಡುವಂತೆ ಮಾರ್ಕೆಟಿಂಗ್ ಸೊಸೈಟಿಯ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದು ಕುತೂಹಲ ಮೂಡಿಸಿದೆ.
ಈ ಹಿಂದೆ ನಡೆದ ಸಹಕಾರಿ ಸಂಘಗಳ ಚುನಾವಣೆಯಲ್ಲಿಯೂ ಇದೇ ನಿಯಮ ಅನ್ವಯಿಸಿದ್ದರೆ ಎಲ್ಲರಿಗೂ ಮತದಾನದ ಹಕ್ಕು ಲಭಿಸುತ್ತಿತ್ತು ಮತ್ತು ಕೋರ್ಟ ಮೊರೆ ಹೋಗಿ ಮತದಾನದ ಅವಕಾಶ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹಿಂದೆ ಅವಕಾಶ ವಂಚಿತರಾದವರು ಹತಾಶೆ ವ್ಯಕ್ತಪಡಿಸುತ್ತಿರುವುದು ಒಂದೆಡೆಯಾದರೆ ಉಪ ನಿಬಂಧಕರು ವಿಚಾರಣಾಧಿಕಾರಿಯಾಗಿ ನೇಮಿಸದ ಹೊರತು ತಾಲೂಕಾ ಮಟ್ಟದ ಸಹಕಾರಿ ಸಂಸ್ಥೆಯ ವಿಚಾರಣೆ ನಡೆಸುವ ಅಧಿಕಾರ ಸಹಾಯಕ ನಿಬಂಧಕರಿಗೆ ಇಲ.್ಲ ಸಹಾಯಕ ನಿಬಂಧಕರು ಇದನ್ನು ಉಲ್ಲಂಘಿಸಿದ್ದಾರೆನ್ನುವ ಆರೋಪವೂ ಕೇಳಿಬರುತ್ತಿದೆ.
ಚುನಾವಣೆಗೆ ದಿನಾಂಕ ನಿಗಧಿಯಾಗುವ ಪೂರ್ವದಲ್ಲಿಯೇ ತೆರೆಮರೆಯ ಕಸರತ್ತುಗಳು ಜೋರಾಗಿ ನಡೆಯುತ್ತಿದ್ದು ಮಾರ್ಕೆಟಿಂಗ್ ಸೊಸೈಟಿ ಚುನಾವಣಾ ವಿಷಯ ಕೋರ್ಟ ಮೆಟ್ಟಿಲೇರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.
ಕನಿಷ್ಠ ಮೂರು ಸಾಮಾನ್ಯ ಸಭೆಗಳಿಗೆ ಹಾಜರಾದ ಸದಸ್ಯರು ಮಾತ್ರ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ದಿಸಲು ಮತ್ತು ಮತ ಚಲಾಯಿಸಲು ಅರ್ಹತೆ ಪಡೆದುಕೊಳ್ಳುತ್ತಾರೆ ಎನ್ನುವ ನಿಯಮ ಜಾರಿಯಾದ ನಂತರ ನಡೆದ ಹಲವಾರು ಸಹಕಾರಿ ಸಂಘಗಳ ಚುನಾವಣೆಯಲ್ಲಿ ಸಂಘದ ಸದಸ್ಯರಾಗಿದ್ದ ಅರ್ಧಕ್ಕಿಂತ ಹೆಚ್ಚುಮುಂದಿ ಮತದಾನದ ಹಕ್ಕನ್ನೇ ಕಳೆದುಕೊಂಡಿದ್ದರು. ಇನ್ನು ಕೆಲವರು ಹೈಕೋರ್ಟ ಮೊರೆಹೋಗಿ ಮತದಾನದ ಹಕ್ಕನ್ನು ಪಡೆದುಕೊಂಡಿದ್ದರು.
ತಾತ್ಕಾಲಿಕ ಮತದಾರರ ಪಟ್ಟಿಯನ್ನು ಹಿಂದಿನ ಸಹಾಯಕ ನಿಬಂಧಕರು ಪರಿಶಿಲಿಸಿ ಜಾಯಿಂಟ್ ರಿಜಿಸ್ಟರ್ ಅವರಿಂದ ದ್ರಢೀಕರಣ ಸಹ ಮಾಡಿಯಾಗಿದೆ. ಅರ್ಹ ಮತದಾರರ ಯಾದಿಯಲ್ಲಿ ತಮ್ಮನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಕೆಲವರು ಆಕ್ಷೇಪಣೆ ಸಲ್ಲಿಸಿದಾಗ ನಾವು ಪರೀಶಿಲನೆ ನಡೆಸಿದ್ದು. ತಾತ್ಕಾಲಿಕ ಮತದಾರರ ಯಾದಿಯನ್ನು ತಯಾರಿಸುವಾಗ ಕಾರ್ಯದರ್ಶಿಯವರು ಯರ್ಯಾರು ಮೂರು ಸಾಮಾನ್ಯ ಸಭೆಗಳಿಗೆ ಹಾಜರಾಗಿಲ್ಲವೋ ಅವರ ಬಗ್ಗೆ ಬರೆಯಬೇಕಿತ್ತು. ಏನನ್ನೂ ಬರೆಯದ ಕಾರಣ ಅವರನ್ನು ಅರ್ಹ ಮತದಾರರು ಎಂದೇ ಪರಿಗಣಿಸುವಂತೆ ನಿರ್ದೇಶನ ನೀಡಿದ್ದೇನೆ – ಸಹಾಯಕ ನಿಬಂಧಕರು, ಸಹಕಾರ ಸಂಘಗಳು ಕುಮಟಾ ಉಪವಿಭಾಗ.]
ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು
ಟಿ.ಎ.ಪಿ.ಸಿ. ಎಂ. ಎಸ್ ಗಳ ವಿಚಾರಣೆ ನಡೆಸುವ ಅಧಿಕಾರ ಉಪನಿಬಂಧಕರದ್ದಾಗಿದ್ದು, ಸಹಾಯಕ ನಿಬಂಧಕರು ತಮ್ಮ ವ್ಯಾಪ್ತಿಯನ್ನು ಮೀರಿ ವಿಚಾರಣೆ ನಡೆಸಿ ನೀಡಿರುವ ನಿರ್ದೇಶನ ಸಹಕಾರ ಸಂಘಗಳ ಕಾಯ್ದೆಗೆ ವಿರುದ್ಧ. ಇದಕ್ಕೆ ಎಲ್ಲಾ ಅರ್ಹ ಸಂಘದ ಸದಸ್ಯರ ಆಕ್ಷೇಪಣೆಯಿದೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಮಾನ್ಯ ಜಿಲ್ಲಾಧಿಕಾರಿಗಳು ಸಹಾಯಕ ನಿಬಂಧಕರಿಗೆ ಸೂಕ್ತ ಆದೇಶವನ್ನು ನೀಡಿ ನಿಯಮಾವಳಿಯನ್ವಯ ಚುನವಾಣೆ ನಡೆಸಲು ಅವಕಾಶ ಕಲ್ಪಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ. -ಗಣಪಯ್ಯ ಕನ್ಯಾ ಗೌಡ, ಅಧ್ಯಕ್ಷರು, ಟಿ.ಎ.ಪಿ.ಸಿ.ಎಮ್.ಎಸ್. ಲಿ. ಹೊನ್ನಾವರ
Leave a Comment