ದಾಂಡೇಲಿ :
ಜಿಲ್ಲೆಯ ಮೊದಲ ನಗರ ಸಭೆ ಎಂಬ ಶ್ರೇಯಸ್ಸನ್ನು ಹೊಂದಿರುವ ದಾಂಡೇಲಿ ನಗರ ಸಭೆ ಇತ್ತೀಚಿನ ವರ್ಷಗಳಲ್ಲಂತೂ ಹಲವಾರು ಎಡವಟ್ಟುಗಳ ಮೂಲಕ ನರಕ ಸಭೆಯಾಗಿ ಮಾರ್ಪಡುತ್ತಿರುವುದರ ಜೊತೆಗೆ ಸಚಿವ ದೇಶಪಾಂಡೆಯವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ನಗರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾನೂನನ್ನು ಪಾಲಿಸಬೇಕಾದ ನಗರ ಸಭೆ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದೆ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಹಿರಿಯ ಸದಸ್ಯರಾಗಿದ್ದ ಎನ್.ಜಿ.ಸಾಳೊಂಕೆಯವರು ನಗರ ಸಭೆಯ ಅಧ್ಯಕ್ಷರಾದ ನಂತರದ ದಿನಗಳಲ್ಲಿ ಅತಿಕ್ರಮಣ ಕಟ್ಟಡಗಳು ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿರುವುದರ ಹಿಂದೆ ಸಾಳೊಂಕೆಯವರ ಹೆಸರು ಕೇಳಿಬರುತ್ತಿದೆ.
ನಗರದ ಇತಿಹಾಸದಲ್ಲೆ ಇಷ್ಟೊಂದು ಪ್ರಮಾಣದಲ್ಲಿ ಅತಿಕ್ರಮಣಗಳು ನಡೆದಿರುವ ಉದಾಹರಣೆ ಇಲ್ಲವಾಗಿದ್ದು, ಇದು ಎನ್.ಜಿ.ಸಾಳೊಂಕೆಯವರ ಅಸಮರ್ಥತೆಯನ್ನು ಎತ್ತಿ ತೋರಿಸುತ್ತಿದೆ. ನಗರದ ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿ ಆ ಭಾಗದ ನಗರ ಸಭಾ ಸದಸ್ಯ ಅಡಿವೆಪ್ಪ ಭದ್ರಕಾಳಿಯವರ ಮನೆ ಸನಿಹದಲ್ಲೆ ಈಗಾಗಲೆ ಅತಿಕ್ರಮಣ ಜಾಗದಲ್ಲಿ ಏಳೆಂಟು ಮನೆಗಳು ನಿರ್ಮಾಣಗೊಂಡಿದ್ದು, ಇನ್ನೂ ಹಲವಾರು ಮನೆಗಳು ನಿರ್ಮಾಣವಾಗುವ ಹಂತದಲ್ಲಿದೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಅತಿಕ್ರಮಣಗಳು ನಡೆದಿದ್ದು, ಇದಕ್ಕೆ ನಗರ ಸಭೆಯ ಅಧ್ಯಕ್ಷರ ಮತ್ತು ಅಧಿಕಾರಿಗಳ ಕೃಪಾಕಟಾಕ್ಷವೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.
ಗಣೇಶ ನಗರ ಸಮೀಪದ ಸಾಯಿನಗರದ ಕಾಲೋನಿಯಲ್ಲಿ ಅನಧಿಕೃತ ಒಂದು ಬೃಹತ್ ಮನೆ ಮತ್ತು ಒಂದು ಜೋಪಡಿ ಮನೆ ತಲೆಯೆತ್ತಿದ್ದು, ಉಳಿದಂತೆ ಇಲ್ಲಿಯೂ ಇನ್ನೂ ಹಲವಾರು ಮನೆಗಳು ನಿರ್ಮಾಣಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಅಂಬೇವಾಡಿ ಮತ್ತು ಗಣೇಶನಗರ ಭಾಗದಲ್ಲಿರುವ ಈದ್ಗಾ ಮೈದಾನದ ಬಳಿಯಿರುವ ನಗರ ಸಭೆಯ ಖಾಲಿ ಜಾಗದಲ್ಲಿ ಸುಮಾರು 100 ಜನರು ಜಾಗವನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರ್ವಭಾವಿ ಎಂಬಂತೆ ಗುರುವಾರ ಇಲ್ಲಿ ನೂರಾರು ಜನರು ಸೀರೆಯನ್ನು ತುಂಡು ಮಾಡಿ ಹಗ್ಗವನ್ನಾಗಿ ತಮಗೆ ಬೇಕಾದಂತೆ ಜಾಗಕ್ಕೆ ಬೇಲಿಯನ್ನು ನಿರ್ಮಿಸಿ ಅತಿಕ್ರಮಣ ಮಾಡುವ ಕಾರ್ಯಕ್ಕೆ ಇಳಿದಿರುವುದು ನಗರ ಸಭೆಯ ದುರಾಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದೆ ಬಿಂಬಿತವಾಗಿದೆ.
ಹಳೆ ದಾಂಡೇಲಿಯಿಂದ ಪಟೇಲನಗರಕ್ಕೆ ಹೋಗುವಾಗ ಸಿಗುವ ಹಿಂದು ರುದ್ರಭೂಮಿಯ ಬಳಿಯಿರುವ ನಾಲದ ಹತ್ತಿರ ಸರಿ ಸುಮಾರು 70*70 ಸೈಟನ್ನು ಅತಿಕ್ರಮಿಸಿಕೊಂಡು, ಅಲ್ಲಿ ಈಗಾಗಲೆ ತಾತ್ಕಲಿಕ ಶೆಡ್ ನಿರ್ಮಿಸಿಕೊಳ್ಳಲಾಗಿದೆ. ಉಳಿದಂತೆ ನೂತನ ಐ.ಡಿ.ಎಸ್.ಎಂ ಲೇ ಔಟ್ ಹತ್ತಿರ ರೇಲ್ವೆ ಹಳಿ ಸಮೀಪ ಅತಿಕ್ರಮಿತ ಜಾಗದಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿವೆ. ನಗರದ ಜೆ.ಎನ್.ರಸ್ತೆಯ ಸಂಸ್ಕಾರ್ ಹೋಮ್ ಅಪ್ಲಾಯನ್ಸ್ ನವರು ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿದ್ದು, ಕಟ್ಟಡದ ಹಿಂಬದಿ ಸುಮಾರು 10 ಪೀಟ್ ಅಡಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಬರ್ಚಿ ರಸ್ತೆಯಲ್ಲಿ ದಿನ ಬೆಳಗಾಗುವುದರೊಳಗೆ ಅತಿಕ್ರಮಣ ಕಟ್ಟಡಗಳು, ಶೆಡ್ಗಳು ತಲೆಯೆತ್ತುತ್ತಿವೆ. ನಗರದ ಜೆ.ಎನ್.ರಸ್ತೆಯ ಗಾಬಿ ಆಸ್ಪತ್ರೆಯ ಮುಂಭಾಗದಲ್ಲಿರುವ ನಗರ ಸಭೆಯ ಖಾಲಿ ಜಾಗದಲ್ಲಿ ಯಾವುದೇ ಅನುಮತಿಯಿಲ್ಲದೆ ಗೂಡಂಗಡಿಗಳು ತಲೆಯೆತ್ತಿದ್ದು, ಇವುಗಳ ನಿಯಂತ್ರಣಕ್ಕೆ ನಗರ ಸಭೆ ಯಾವುದೆ ಕ್ರಮ ಕೈಗೊಳ್ಳದಿರುವುದರ ಬಗ್ಗೆ ನಗರದಲ್ಲಿ ಚರ್ಚೆ ನಡೆಯುತ್ತಿದೆ.
ಒಟ್ಟಿನಲ್ಲಿ ಎನ್.ಜಿ.ಸಾಳೊಂಕೆಯವರ ಅಧ್ಯಕ್ಷತೆಯ ನಗರ ಸಭೆಯ ವ್ಯಾಪ್ತಿಯ ನಗರದ ಮೂಲೆ ಮೂಲೆಯಲ್ಲಿ ಅತಿಕ್ರಮಣ ಕಟ್ಟಡಗಳು ಎಗ್ಗಿಲ್ಲದೆ ತಲೆಯೆತ್ತುತ್ತಿದ್ದು, ಅತಿಕ್ರಮಣದಾರರಿಗೆ ನಗರ ಸಭೆಯ ಯಾವೊಂದು ಭಯವಿಲ್ಲದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೂಲಗಳ ಪ್ರಕಾರ ಅತಿಕ್ರಮಣ ಕಟ್ಟಡಗಳೆಲ್ಲವೂ ನಗರಾಡಳಿತದ ಗಮನಕ್ಕೆ ಬಂದೆ ನಿರ್ಮಾಣಗೊಳ್ಳುತ್ತಿದೆ. ಝಣ ಝಣ ಕಾಂಚಣದ ಪ್ರಭಾವವೆ ಇದರ ಹಿಂದಿರುವ ಪ್ರಮುಖ ಅಸ್ತ್ರ ಎಂದೆ ಹೇಳಲಾಗುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಅತಿಕ್ರಮಿತ ಕಟ್ಟಡಗಳಿಗೆ ಕಟ್ಟಡ ನಿರ್ಮಾಣಗೊಂಡು ವಿದ್ಯುತ್ ಸಂಪರ್ಕ ನೀಡಲಾಗುತ್ತಿದ್ದು, ಇದಕ್ಕೆ ನೀರಾಪೇಕ್ಷಣಾ ಪತ್ರ ನೀಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯು ನಗರ ಸಭೆಯ ಮೇಲಿದೆ.
ಅತಿಕ್ರಮಣ ಕಟ್ಟಡ ನಿರ್ಮಾಣದ ಬಗ್ಗೆ ದೂರು ನೀಡಿದ್ದಲ್ಲಿ ಬಡವರು ಅತಿಕ್ರಮಿಸಿಕೊಂಡ ಜೋಪಡಿಗಳನ್ನಷ್ಟೆ ಕಿತ್ತೋಗೆಯುತ್ತಾರೆ. ಆದರೆ ಶ್ರೀಮಂತರ ಅತಿಕ್ರಮಣ ಕಟ್ಡಡಗಳನ್ನು ಕೀಳುವುದಿಲ್ಲ ಎಂಬ ಅಭಿಪ್ರಾಯವು ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಯವರು ತುರ್ತಾಗಿ ದಾಂಡೇಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕ ಅಹಲವಾಲು ಸಭೆ ಕರೆದು ನಗರ ಸಭೆಯ ಅಂಧ ದರ್ಬಾರಿಗೆ ಇತೀಶ್ರೀ ಹಾಡಬೇಕಾಗಿದೆ ಎಂಬ ಆಗ್ರಹ ಕೇಳಿಬರುತ್ತಿದೆ.
ನನ್ನ ಗಮನಕೆ ಬಂದಿಲ್ಲ- ಈ ಬಗ್ಗೆ ಪರಿಶೀಲಿಸುತ್ತೇನೆ: ಎನ್.ಜಿ.ಸಾಳೊಂಕೆ
ಅತಿಕ್ರಮಣ ಕಟ್ಟಡ ಹಾಗೂ ಅತಿಕ್ರಮಿತ ಜಾಗದ ಬಗ್ಗೆ ನಗರ ಸಭೆಯ ಅಧ್ಯಕ್ಷರನ್ನು ಮಾತನಾಡಿಸಿದಾಗ, ಅವರು ಇದು ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸುತ್ತೇನೆ ಎಂದು ಹೇಳಿ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅವರತ್ರ ದಾಖಲೆಗಳಿವೆ, ಮನೆ ಕಟ್ಟಿಕೊಂಡಿದ್ದಾರೆ: ಅಡಿವೆಪ್ಪ ಭದ್ರಕಾಳಿ
ತಮ್ಮ ವಾರ್ಡಿನಲ್ಲಿ ಅತಿಕ್ರಮಣ ಮನೆಗಳು ನಿರ್ಮಾಣಗೊಳ್ಳುತ್ತಿದೆಯಲ್ಲಾ ಎಂದು ಗಾಂಧಿನಗರ ವಾರ್ಡಿನ ಸದಸ್ಯ ಅಡಿವೆಪ್ಪ ಭದ್ರಕಾಳಿಯವರನ್ನು ಕೇಳಿದಾಗ, ಅವರತ್ರ ಕಾಗದ ಪತ್ರಗಳಿವೆ, ಬೇಕಿದ್ರೆ ನೀವು ಇಲ್ಲಿ ಬಂದು ಪರಿಶೀಲನೆ ಮಾಡಿ ಎಂದು ಹೇಳಿಕೆ ನೀಡಿದ್ದಾರೆ.
ಅತಿಕ್ರಮಣವನ್ನು ಬೆಂಬಲಿಸಲ್ಲ: ರೋಶನ್ ಬಾವಾಜಿ
ನಗರದಲ್ಲಿ ಅತಿಕ್ರಮಣ ನಡೆಯುತ್ತಿದ್ದು, ಇದನ್ನು ಯಾವತ್ತು ಬೆಂಬಲಿಸುವುದಿಲ್ಲ. ಅತಿಕ್ರಮಣವನ್ನು ತೆರೆಯುವಂತೆ ನಗರ ಸಭೆಯ ಅಧ್ಯಕ್ಷರಿಗೆ ಆಗ್ರಹಿಸಲಾಗಿದೆ ಎಂದು ಗಣೇಶನಗರ ವಾರ್ಡ್ ಸದಸ್ಯ ರೋಶನ್ ಬಾವಾಜಿ ಪತ್ರಿಕೆಗೆ ತಿಳಿಸಿದ್ದಾರೆ.
ಕ್ರಮ ಕೈಗೊಳ್ಳುವೆ: ಡಿಸಿ ನಕುಲ್
ದಾಂಡೇಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅತಿಕ್ರಮಣ ಕಟ್ಡಡಗಳು ಭಾರಿ ಪ್ರಮಾಣದಲ್ಲಿ ತಲೆಯೆತ್ತುತ್ತಿವೆ ಎಂದು ಜಿಲ್ಲಾಧಿಕಾರಿ ನಕುಲ್ ಅವರನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದಾಗ, ಅವರು ಈ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಂಡರಲ್ಲದೇ ಮತ್ತು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
Leave a Comment