ದಾಂಡೇಲಿ :
ಮೀತಿ ಮೀರಿ ನಡೆಯುತ್ತಿರುವ ಅತಿಕ್ರಮಣ ಕಟ್ಟಡ ನಿರ್ಮಾಣದ ವಿರುದ್ದ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಬಂದ ವರದಿಗೆ ಬೆಚ್ಚಿ ಬಿದ್ದ ಎನ್.ಜಿ.ಸಾಳೊಂಕೆ ಅಧ್ಯಕ್ಷತೆಯ ನಗರ ಸಭೆ ಅಂತೂ ಕೊನೆಗೆ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಡಿಯಿಟ್ಟಿದೆ.
ಪ್ರಥಮವಾಗಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಗಣೇಶ ನಗರ ಸಮೀಪದ ಸಾಯಿನಗರದ ಕಾಲೋನಿಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಬೃಹತ್ ಕಟ್ಟಡವನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯಕ್ಕೆ ಅಣಿಯಾಗುತ್ತಿದ್ದಂತೆಯೆ ಅಲ್ಲೆ ಪಕ್ಕದಲ್ಲಿದ್ದ ಜೋಪಡಿ ಮನೆಯನ್ನು ಅತಿಕ್ರಮಣದಾರರೆ ಖುಲ್ಲ ಪಡಿಸಿದರು. ಉಳಿದಂತೆ ಅಂಬೇವಾಡಿ ಮತ್ತು ಗಣೇಶನಗರ ಭಾಗದಲ್ಲಿರುವ ಈದ್ಗಾ ಮೈದಾನದ ಬಳಿಯಿರುವ ನಗರ ಸಭೆಯ ಖಾಲಿ ಜಾಗದಲ್ಲಿ ಅತಿಕ್ರಮಣ ಮಾಡಿರುವುದನ್ನು ಖುಲ್ಲ ಪಡಿಸಲಾಗಿದೆ.
ಆರೋಗ್ಯ ನಿರೀಕ್ಷಕ ಸುನೀಲ ಗಾವಡೆಯವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಪತ್ರಿಕೆಗೆ ಲಭ್ಯವಾದ ಮಾಹಿತಿಯ ಪ್ರಕಾರ ಉಳಿದಿರುವ ಅತಿಕ್ರಮಣ ಕಟ್ಟಡ ಮತ್ತು ಅತಿಕ್ರಮಣ ಜಾಗ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದೆಂದು ತಿಳಿದುಬಂದಿದೆ.
ಅಕ್ಕನ ಮನೆ ಕೆಡವಿದ ತಮ್ಮ :
ಆಶ್ಚರ್ಯವಾದರೂ ಸತ್ಯ, ಗಣೇಶ ನಗರ ಸಮೀಪದ ಸಾಯಿನಗರದ ಕಾಲೋನಿಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಬೃಹತ್ ಕಟ್ಟಡವನ್ನು ಅತಿಕ್ರಮಿತ ಮನೆಯ ಮಾಲಕಿಯ ತಮ್ಮನಾದ ನಗರ ಸಭೆಯ ಜೆಸಿಬಿಯ ಚಾಲಕ ಅಬ್ದುಲ್ ಖಾದರ್ ಅಜ್ರೇಕರ ಅವರೆ ಜೆಸಿಬಿ ಮೂಲಕ ಒಲ್ಲದ ಮನಸ್ಸಿನಿಂದ ಕೆಡವಿದರು. ಮೊದಲು ಜೆಸಿಬಿ ಆ ಕಟ್ಟಡದ ಬಳಿ ಬಂದಿತ್ತಾದರೂ ಕಾರ್ಯಾಚರಣೆ ಮಾಡಲು ಮುಂದಾಗಿರಲಿಲ್ಲ. ಆನಂತರ ಒಲ್ಲದ ಮನಸ್ಸಿನಿಂದ ಮತ್ತು ಆರೋಗ್ಯ ನಿರೀಕ್ಷಕ ಸುನೀಲ ಗಾವಡೆಯವರ ನಿರ್ದೇಶನದಿಂದ ಜೆಸಿಬಿ ಮೂಲಕ ಕಟ್ಟಡ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಗೋಡೆಯನ್ನು ಬೀಳಿಸಿ ಅಡಿಪಾಯವನ್ನು ತೆಗೆಯಲು ಹಿಂದೇಟು ಹಾಕುತ್ತಿದ್ದಂತೆ ಮತ್ತೆ ಅಡಿಪಾಯವನ್ನು ತೆಗೆಯಲು ಆರೋಗ್ಯ ನಿರೀಕ್ಷಕ ಸುನೀಲ ಗಾವಡೆ ಆದೇಶಿಸಿದರು. ಒಟ್ಟಿನಲ್ಲಿ ಈ ಕಟ್ಟಡ ಯಾವುದೇ ಕಾರಣಕ್ಕೂ ಖುಲ್ಲಪಡಿಸಬಾರದೆಂಬ ಕಾಣದ ಕೈಗಳ ಕುತಂತ್ರಗಾರಿಕೆಗೆ ಕೊನೆಗೂ ಫಲ ದೊರಕಲಿಲ್ಲ.
ಆಶ್ರಯ ಕಾಲೋನಿಯಲ್ಲಿ ನಗರ ಸಭಾ ಸದಸ್ಯರ ಮನೆ ಸನಿಹದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಿತ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, ಅವುಗಳ ತೆರವು ಕಾರ್ಯಾಚರಣೆಯು ನಾಳೆಯಿಂದ ತಪ್ಪಿದರೇ ಭಾನುವಾರದಿಂದ ನಡೆಯಲಿದೆ. ಇಲ್ಲಿ ಮಧ್ಯವರ್ತಿಯೊಬ್ಬರು ತಾವೆ ಮುಂದೆ ನಿಂತು ರೂ:50 ಸಾವಿರ ಪಡಕೊಂಡು ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಮಾಹಿತಿ ಹೊರಬೀಳುತ್ತಿದ್ದು, ಇಲ್ಲಿ ಅತಿಕ್ರಮಿತ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಹಣ ಪಡೆದುಕೊಂಡಿರುವ ಮಧ್ಯವರ್ತಿಯ ವಿರುದ್ದ ಅತಿಕ್ರಮಣದಾರರು ತಿರುಗಿ ಬೀಳುವ ಸಾಧ್ಯತೆಯಿದೆ ಎಂಬ ಮಾತು ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಕೊಟ್ಟವ ಕೊಡಂಗಿ ಇಸ್ಕೊಂಡವ ವೀರಭದ್ರ ಎಂಬ ಮಾತು ಚರ್ಚೆಯಲ್ಲಿದ್ದು, ಮುಂದೇನು? ಎಂಬ ಪ್ರಶ್ನೆಯೊಂದಿಗೆ ಅತಿಕ್ರಮಣದಾರರು ಇದ್ದರೇ, ಉಳಿದಂತೆ ಹಳೆ ದಾಂಡೇಲಿಯಿಂದ ಪಟೇಲನಗರಕ್ಕೆ ಹೋಗುವಾಗ ಸಿಗುವ ಹಿಂದು ರುದ್ರಭೂಮಿಯ ಬಳಿಯಿರುವ ನಾಲದ ಹತ್ತಿರ ಸರಿ ಸುಮಾರು 70*70 ಸೈಟ್, ಐ.ಡಿ.ಎಸ್.ಎಂ ಲೇ ಔಟ್ ಹತ್ತಿರ ರೇಲ್ವೆ ಹಳಿ ಸಮೀಪ ಅತಿಕ್ರಮಿತ ಜಾಗದಲ್ಲಿ ನಿರ್ಮಾಣಗೊಂಡ ಮನೆಗಳು, ಜೆ.ಎನ್.ರಸ್ತೆಯ ಸಂಸ್ಕಾರ್ ಹೋಮ್ ಅಪ್ಲಾಯನ್ಸ್ ನವರು ಅತಿಕ್ರಮಿಸಿದ ಜಾಗ, ಜೆ.ಎನ್.ರಸ್ತೆಯ ಗಾಬಿ ಆಸ್ಪತ್ರೆಯ ಮುಂಭಾಗದಲ್ಲಿರುವ ನಗರ ಸಭೆಯ ಖಾಲಿ ಜಾಗದಲ್ಲಿ ಅನುಮತಿಯಿಲ್ಲದಿರುವ ಗೂಡಂಗಿಗಳು, ಸಂಡೇ ಮಾರ್ಕೆಟ್ ಬಳಿ ಅತಿಕ್ರಮಿತ ಕಟ್ಟಡದಲ್ಲಿರುವ ಚಿಕನ್ ಅಂಗಡಿಗಳು, ಬರ್ಚಿ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ.
ಈ ಎಲ್ಲ ಅತಿಕ್ರಮಿತ ಕಟ್ಟಡಗಳನ್ನು ಹಾಗೂ ಜಾಗವನ್ನು ನಗರ ಸಭೆ ಖುಲ್ಲ ಪಡಿಸಿತೆ? ಅಥವಾ ಡೀಲಿಂಗಿಗೆ ಒಳಗಾಗಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ನೈಜ ಆಟವಾಡಿತೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಸ್ವಲ್ಪ ದಿನ ಕಾದುನೋಡಬೇಕಾಗಿದೆ.
Leave a Comment