ಹೊನ್ನಾವರ:
||ಇಚ್ಚಾ ಶಕ್ತಿಯ ಕೊರತೆ|| ನೆರೆ ಸಂತ್ರಸ್ಥರ ತಪ್ಪದ ಗೋಳು| ದೇವರು ಕೊಟ್ಟರೂ ಪೂಜಾರಿ ಕೊಡ?
ಎನ್ನುವುದು ಇಲ್ಲಿ ಸತ್ಯವಾಗಿದೆ. ಹಕ್ಕು ಪತ್ರಕ್ಕಾಗಿ 75 ವರ್ಷಗಳಿಂದ ಕಾದಿರುವ ಶರಾವತಿ ಸಂತ್ರಸ್ಥರು. ಇದು ತಾಲೂಕಿನ ಹೆರಂಗಡಿ ಗ್ರಾಮದ ಅಳ್ಳಂಕಿ & ಹೆರಂಗಡಿ ಭಾಗದ ನೆರೆ ಸಂತ್ರಸ್ಥರ ವ್ಯಥೆಯ ಕಥೆ ಇದು. ಸರಕಾರದಿಂದಲೇ ನದಿ ತೀರದ ಜನರನ್ನು ಸುರಕ್ಷಿತ ಎತ್ತರದ ಅರಣ್ಯ ಭೂಮಿಗೆ ಶಾಶ್ವತವಾಗಿ ಸ್ಥಳಾಂತರಿಸಲ್ಪಟ್ಟವರ ಗೋಳಿನ ಕಥೆ ಇದು.
ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಮತ್ತು ಇಚ್ಚಾಶಕ್ತಿಯ ಕೊರತೆಯಿಂದಾಗಿ ಸರ್ಕಾರದ ಉತ್ತಮ ಯೋಜನೆಯೊಂದು ಹಳ್ಳ ಹಿಡಿಯುವಂತಾದ ತಾಜಾ ನಿದರ್ಶನವೊಂದು ತಾಲೂಕಿನ ಹೆರಂಗಡಿ & ಅಳ್ಳಂಕಿಯಿಂದ ವರದಿಯಾಗಿದೆ. 1960ರ ಪೂರ್ವ ಶರಾವತಿ ನದಿಗೆ ಬೀಕರ ನೆರೆ ಬಂದ ಸಂದರ್ಭ ಅಂದಿನ ಜಿಲ್ಲಾ ಮತ್ತು ತಾಲೂಕು ಆಡಳಿತದವರು ನದಿ ತೀರದ ನೆರೆ ಸಂತ್ರಸ್ಥರನ್ನು ಸುರಕ್ಷಿತವಾದ ಸ್ಥಳಗಳಿಗೆ ಶಾಶ್ವತವಾಗಿ ಸ್ಥಳಾಂತರಿಸಲು ನಿರ್ಧರಿಸಿ ಇದಕ್ಕಾಗಿ ಹೆರಂಗಡಿ & ಅಳ್ಳಂಕಿಯಲ್ಲಿ ಎತ್ತರದ ಅರಣ್ಯ ಭೂಮಿಯನ್ನು ಗುರುತಿಸಿ 60×40 ರ ನೂರಾರು ನಿವೇಶನಗಳನ್ನು ರಚಿಸಿ ನಿರಾಶ್ರಿತರ ಬಡಾವಣೆಗಳನ್ನು ನಿರ್ಮಿಸಿದರು. ಸರ್ಕಾರದ ಖರ್ಚಿನಲ್ಲಿಯೇ ಮನೆಗಳನ್ನು ನಿರ್ಮಿಸಿಕೊಟ್ಟು ನದಿ ತೀರದ ನೂರಾರು ಕುಟುಂಬಗಳನ್ನು ಅಂದು ಸ್ಥಳಾಂತರಿಸಿದ್ದು ಇತಿಹಾಸ. ತದನಂತರ ನಿರಾಶ್ರಿತರಿಗೆ ಸ್ಥಳದ ಹಕ್ಕು ಪತ್ರ ನೀಡಲು ಅರಣ್ಯ ಭೂಮಿಯ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಯಿತು. ಆಯಾ ನೆರೆ ಸಂತ್ರಸ್ಥರಿಗೆ ಸ್ಥಳದ ಹಕ್ಕು ಪತ್ರ ನೀಡಲು ಸರ್ಕಾರವು ತನ್ನ ಆದೇಶ ನಂ. ಉo- ಓo. ಂಈಆ 133 ಈಉಐ61 ಜಣಜ 28-02-1962 ರಂತೆ ಅಳ್ಳಂಕಿಯಲ್ಲಿ 6-0-0
ಅರಣ್ಯ ಭೂಮಿಯನ್ನು ಬಿಡುಗಡೆ ಮಾಡಿತ್ತು. ಇದೇ ಸಂದರ್ಭದಲ್ಲಿ ಸರ್ಕಾರವು ವಸತಿ ರಹಿತರಿಗಾಗಿ ಜನತಾ ಮನೆಗಳನ್ನು ನಿರ್ಮಿಸುವ ಯೋಜನೆ ಪ್ರಕಟಿಸಿತು. ಕಾಲ ಮಿತಿಯಲ್ಲಿ ನಿರ್ದಿಷ್ಟ ಗುರಿ ಸಾಧಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು. ಜಾಗೆಗಾಗಿ ಹುಡುಕಾಟ ನಡೆಯಿತು,. ಕಂದಾಯ ಸ್ಥಳ ಎಲ್ಲೂ ಸಿಗಲಿಲ್ಲ ಕೊನೆಗೆ ಯಾವುದೋ ಅಧಿಕಾರಿಗೆ ಹೊಳೆದ ಉಪಾಯ ನೆರೆ ಸಂತ್ರಸ್ಥರನ್ನು ಅತಂತ್ರವಾಗುವಂತೆ ಮಾಡಲಾಯಿತು. ನೆರೆ ಸಂತ್ರಸ್ಥರಿಗೆ ಅಂದು ಮಂಜೂರಾದ ಜಾಗೆಯ ನಕ್ಷೆಯನ್ನೇ ಅಂತಿಮವಾಗಿ ಬದಲಾಯಿಸಿ ಜನತಾ ಮನೆಗಳ ಫಲಾನುಭವಿಗಳಿಗೆ ಹಂಚಿಕೆಮಾಡಲಾಯಿತು ಕಡತಗಳಲ್ಲಿ ನಿವೇಶನ ರಹಿತರಿಗೆ ನೀವೇಶನ ಹಂಚಿಕೆ ಮಾಡಿ ಶಹಬ್ಬಾಸ್ಗಿರಿ ಗಿಟ್ಟಿಸಿದ್ದೂ ಆಯಿತು. ಆದರೆ ಇದೇ ಸ್ಥಳ ಮತ್ತೆ ಮತ್ತೆ ಆಶ್ರಯ ಅಂಬೇಡ್ಕರ್ ಯೋಜನೆಯಲ್ಲಿ ಗುರಿಸಾಧನೆಗಾಗಿ ಬಳಕೆ ಮಾಡಿದ್ದೂ ಆಯಿತು (ಕಡತಗಳಲ್ಲಿ ಮಾತ್ರ). ಆದರೆ ವಿವಿಧ ಯೋಜನೆಗಳಲ್ಲಿ ನೀಡಲಾದ ನಿವೇಶನ ಪಟ್ಟಾಗಳು ನಿರಂತರ 65 ವರ್ಷಗಳ ನಂತರವೂ ಪಹಣೆ ಪತ್ರಗಳಲ್ಲಿ (ಹಕ್ಕು ನೀಡಿದ ದಾಖಲೆಗಳು) ಅಡಕಗೊಳ್ಳದೇ ಎಲ್ಲರೂ ಅತಂತ್ರರಾಗಿಯೇ ಉಳಿಯಬೇಕಾದದ್ದು ವಿಪರ್ಯಾಸ. ಅಂತಿಮವಾಗಿ ನೆರೆ ಸಂತ್ರಸ್ಥರು ಅತಂತ್ರರಾಗಿಯೇ ಉಳಿದಿದ್ದು 75 ವರ್ಷಗಳ ನಂತರವೂ ಅವರು ವಾಸವಿದ್ದ ಸ್ಥಳದ ಹಕ್ಕು ಪತ್ರ ಪಡೆಯುವಲ್ಲಿ ವಂಚಿತರಾಗಿದ್ದಾರೆ. 1975-76ರ ಪಹಣಿಯಲ್ಲಿ ಹಲವು ನೆರೆ ಸಂತ್ರಸ್ಥರ ಹೆಸರು ಅತೀಕ್ರಮದಾರರು ಎಂದು ನಮೂದು ಇರುವ ಅಧೀಕೃತ ದಾಖಲೆ ಹೊಂದಿದ್ದರೂ 1978ರ ಪೂರ್ವದ ಅರಣ್ಯ ಅತೀಕ್ರಮಣ-ಸಕ್ರಮಪಡಿಸುವ ಪ್ರಕ್ರಿಯೆ ಸಂದರ್ಭದಲ್ಲಿ ಇವರನ್ನು ಪರಿಗಣಿಸದೇ ಇರುವುದು ನಮ್ಮ ಸರ್ಕಾರಗಳ ಇಚ್ಚಾಶಕ್ತಿಯನ್ನು ಅಣುಕಿಸುವಂತಿದೆ. ಈಗ ಇವರುಗಳೆಲ್ಲರೂ ಅರಣ್ಯಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿ ಈಗಲಾದರೂ ತಮಗೆ ಹಕ್ಕು ಪತ್ರ ದೊರಕಿ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದು ಜಿಲಾಧಿಕಾರಿಗಳ ಗಮನ ಸೆಳೆದಿದ್ದಾರೆ. ಸಚಿವ ಕಾಗೋಡ ತಿಮ್ಮಪ್ಪನವರು ನಾಳೆ ಹೊನ್ನಾವರಕ್ಕೆ ಭೇಟಿ ನೀಡುವ ಸಂಧರ್ಭದಲ್ಲಿ ಅರಣ್ಯ ಭೂಮಿ ಅತೀಕ್ರಮಣದಾರರ ತಾಲೂಕು ಸಂಘಟನೆಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ನೇತ್ರತ್ವದಲ್ಲಿ-ನೆರೆ ಸಂತ್ರಸ್ಥರ ನಿಯೋಗವು ಸಚಿವರನ್ನು ಭೇಟಿಮಾಡಲು ನಿರ್ಧರಿಸಿದ್ದಾರೆ. ನೆರೆ ಸಂತ್ರಸ್ಥರಿಗೆ ನ್ಯಾಯ ದೊರಕಿಸುತ್ತಾರೋ ಕಾದು ನೋಡಬೇಕು.
Leave a Comment