ಕಾರವಾರ:
ಗಂಗಾವಳಿ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ವಿದ್ಯುತ್ ಕಡಿತಗೊಳಿಸಿದ ಅಡಿಕೆ ಮರಗಳಿಗೆ ನೀರು ಪೂರೈಕೆಯಾಗದೇ ಬೆಳೆ ಹಾನಿ ಉಂಟಾಗಿದೆ. ಇದರ ನಷ್ಟವನ್ನು ಜಿಲ್ಲಾಡಳಿತ ಭರಿಸಬೇಕು ಎಂದು ಅಲ್ಲಿನವರು ಒತ್ತಾಯಿಸಿದ್ದಾರೆ.
ಕುಡಿಯುವ ನೀರಿಗೆ ತೊಂದರೆ ಎಂದು ಜಿಲ್ಲಾಡಳಿತ ನದಿ ನೀರನ್ನು ಬಳಸದಂತೆ ಗಂಗಾವಳಿ ನದಿ ಕೊಳ್ಳದ ನಿವಾಸಿಗಳಿಗೆ ಸೂಚಿಸಿದ್ದು, ಪಂಪ್ ಶುರು ಮಾಡಲು ಅವಷ್ಯವಿರುವ ವಿದ್ಯುತ್ ಕಡಿತ ಮಾಡಿತ್ತು. ವಿದ್ಯುತ್ ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಹಲವು ಭಾರಿ ಮನವಿ ಮಾಡಿಕೊಂಡರು ಸ್ಪಂದಿಸಿರಲಿಲ್ಲ. ಇದರಿಂದ ಗಂಗಾವಳಿ ತಟದ ರೈತರು ನ್ಯಾಯಾಲಯದ ಮೋರೆ ಹೋಗಿದ್ದರು. ಅದರಂತೆ ಅರ್ಜಿಯನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಕೂಡ ಜಿಲ್ಲಾಧಿಕಾರಿ ಆದೇಶಕ್ಕೆ 12 ವಾರಗಳ ತಡೆಯಾಜ್ಞೆ ನೀಡಿ3 ಫೆಸ್ ವಿದ್ಯುತ್ ಪೂರೈಕೆ ಮಾಡುವಂತೆ ಸೂಚಿಸಿತು. ಇದರಿಂದ ಕಳೆದ ಕೆಲ ದಿನಗಳಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಈಗಾಗಲೆ ಬೆಳೆಗಳು ನೀರಿಲ್ಲದೆ ಕೆಂಪಾಗಿದೆ. ಹೀಗಾಗಿ ಇದರ ಪರಿಹಾರವನ್ನು ಜಿಲ್ಲಾಡಳಿತ ಒದಗಿಸಬೇಕು ಎಂದು ಕೃಷಿ ಭೂಮಿ ಸಂರಕ್ಷಣಾ ಸಮೀತಿ ಅಧ್ಯಕ್ಷ ಶಿವರಾಮ ಗಾಂವಕರ್ ಒತ್ತಾಯಿಸಿದರು.
ಗಂಗಾವಳಿ ನದಿ ತೀರದಲ್ಲಿರುವ ರೈತರು ಸುಮಾರು 3 ಸಾವಿರ ಎಕರೆ ಪ್ರದೇಶಗಳಲ್ಲಿ ಅಡಿಕೆ, ತೆಂಗು, ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆಗಳನ್ನು ಪ್ರತಿ ವರ್ಷ ಬೆಳೆಯುತ್ತಾರೆ. ಆದರೆ ಈ ಪ್ರದೇಶದ ಬೆಳೆಗಳಿಗೆ ಗಂಗಾವಳಿ ನದಿ ನೀರು ಆಧಾರವಾಗಿದ್ದರಿಂದ ಕಳೆದ ಹಲವು ವರ್ಷದಿಂದ 3 ಫೆಸ್ ವಿದ್ಯುತ್ ಬಳಸಿಕೊಂಡು ಬೆಳೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಈ ಭಾರಿ ಜಿಲ್ಲಾಧಿಕಾರಿ ಎಸ್. ಎಸ್ ನಕುಲ್ ಅವರು ಕಳೆದ ಒಂದು ತಿಂಗಳ ಹಿಂದೆ ಯಾವುದೇ ಪೂರ್ವಪರ ಮಾಹಿತಿ ನೀಡದೆ ಏಕಾಏಕಿ 3 ಫೆಸ್ ವಿದ್ಯುತ್ ಕಡಿತಗೊಳಿಸಿದ್ದರು. ಇದರಿಂದ ನೀರಿಲ್ಲದೆ ಬೆಳೆಗಳು ಒಣಗಿ ಬೆಳೆಗೆ ಹಾನಿಯಾಗಿದ್ದು, ಇದಕ್ಕೆ ಜಿಲ್ಲಾಡಳಿತವೇ ಹೋಣೆ ಎಂದು ಅವರು ಆರೋಪಿಸಿದರು. ಗಂಗಾವಳಿ ನದಿ ನೀರು ಬಳಸುವವರಿಗೆ ಪ್ರತಿ ವರ್ಷ ನೀರಿನ ಕೊರತೆಯಾಗುವ ಕಾರಣ ಬೇಸಿಗೆ ಆರಂಭಕ್ಕೂ ಮೊದಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ. ಆದರೆ ಕಾರವಾರ ಅಂಕೋಲಾ ಭಾಗದಲ್ಲಿ ನೀರು ಕಡಿಮೆಯಾಗಿದೆ ಎಂದು ಗಂಗಾವಳಿ ನದಿ ತೀರದ ರೈತರ ವಿದ್ಯುತ್ ಕಡಿತಗೊಳಿಸಿದ್ದರು. ಈ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಕೆಲ ದಿನಗಳ ಬಳಿಕ ಕೇವಲ ಒಂದು ತಾಸು ಮಾತ್ರ 3 ಫೆಸ್ ವಿದ್ಯುತ್ ಪೂರೈಸಿದ್ದರು. ಇದರಿಂದ ಬೆಳೆಗಳಿಗೆ ಹಾನಿಯಾಗಿದ್ದು, ಈ ಭಾಗದ ರೈತರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ನೀರಿಲ್ಲದೆ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಈ ಭಾಗದ ರೈತರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಂಬಂದವೇ ಇಲ್ಲದವರಂತೆ ಹಾರಿಕೆ ಉತ್ತರ ನೀಡುತ್ತಿದಾರೆ. ರೈತರ ಅಭ್ಯುದಯಕಕಾಗಿ ಸರಕಾರ ಅಧಿಕಾರಿಗಳನ್ನು ನೆಮಿಸಿದರೆ ಕಿಂಚಿತ್ತು ಕರುಣೆ ತೋರುತ್ತಿಲ್ಲ. ಆದ್ದರಿಂದ ಕೂಡಲೇ ಕೃಷಿ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕು. ಅಲ್ಲದೆ ವಿದ್ಯುತ್ ಪೂರೈಕೆ ಮಾಡದೆ ಹಾನಿಯಾಗಿರುವುದರಿಂದ ಅದರ ಸಂಪೂರ್ಣ ನಷ್ಟವನ್ನು ಜಿಲ್ಲಾಡಳಿತವೇ ಭರಿಸಬೇಕು. ಇಲ್ಲವಾದಲ್ಲಿ ಗಂಗಾವಳಿ ನದಿ ತೀರದ ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಸದಸ್ಯ ನಾರಾಯಣ ಹೆಗಡೆ, ಯುವ ಒಕ್ಕೂಟದ ಸದಸ್ಯ ರಾಘವೇಂದ್ರ ಗಾಂವ್ಕರ, ವಕೀಲ ನಾಗರಾಜ ನಾಯಕ, ನರಸಿಂಹ ಗಣಪತಿ ಹರಿಮನೆ ಇದ್ದರು.
Leave a Comment