ಭಟ್ಕಳ:
ಸರಕಾರ ನದಿ, ತೊರೆ, ಕೆರೆಗಳನ್ನು ಸ್ವಚ್ಚವಾಗಿಟ್ಟುಕೊಂಡು ಪರಿಸರವನ್ನು ಉಳಿಸುವಂತೆ ಸದಾ ಕಾಲ ಜಾಗೃತಗೊಳಿಸುತ್ತಿರುತ್ತದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವುದು, ಸ್ವಚ್ಚತೆಯ ಕಾರ್ಯ ವ್ಯಾಪಕವಾಗಿ ಸರಕಾರದ ನೆರವಿನಿಂದ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಇದೇ ಉತ್ತರ ಕನ್ನಡದ ನದಿಯೊಂದು ಒಳಚರಂಡಿ ನೀರಿನಿಂದಾಗಿ ಕಲುಷಿತಗೊಂಡು ರೋಗ ಹರಡುವ ಭೀತಿ ಇದ್ದರೂ ಸರಕಾರವಾಗಲೀ, ಸಂಘ ಸಂಸ್ಥೆಗಳಾಗಲೀ ಇತ್ತ ಕಡೆ ಗಮನ ಹರಿಸದೇ ವರ್ಷಾನುಗಟ್ಟಲೆಯಿಂದ ಮುಂದುವರಿದುಕೊಂಡು ಬಂದಿರುವುದು ಮಾತ್ರ ವಿಪರ್ಯಾಸ.
ನತರದ ಚೌತನಿಯ ಶರಾಬಿ ಹೊಳೆ ಭಟ್ಕಳ ನಗರ ಮಧ್ಯದಿಂದ ಸಮುದ್ರ ಸೇರುತ್ತದೆ. ಹಲವು ವರ್ಷಗಳಿಂದ ಇಲ್ಲಿನ ಶರಾಬಿ ಹೊಳೆಯಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ವ್ಯಾಪಕ ತೊಂದರೆಯಾಗುತ್ತಿದೆ. ನದಿಪಾತ್ರದಲ್ಲಿ ತುಂಬಿ ಹರಿಯುವ ನೀರು ಕಳೆದ ವರ್ಷ ಮಳೆಗಾಲದಲ್ಲಿ ಓರ್ವ ಕೊಚ್ಚಿಕೊಂಡು ಹೋಗಿದ್ದು ಶವ ಕೂಡಾ ಪತ್ತೆಯಾಗಿಲ್ಲ ಎನ್ನುವುದು ಉಲ್ಲೇಖನೀಯ. ಪ್ರತಿ ವರ್ಷ ಮಳೆಗಾಲದಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದು ಹೂಳೆತ್ತಲು ಮಾಡಿದ ಮನವಿ ಅರಣ್ಯ ರೋಧನವಾಗಿದೆ. ಶರಾಬಿ ಹೊಳೆಯ ಹೂಳು ತೆಗೆದು ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಟ್ಟು ನದಿ ಪಾತ್ರದಲ್ಲಿರುವ ಜನರನ್ನು ನೆರೆ ಭೀತಿಯಿಂದ ಪಾರು ಮಾಡಬೇಕಾಗಿದೆ.
ಕಲುಷಿತ ನೀರು ಹೊಳೆಗೆ: ಪುರಸಭಾ ವ್ಯಾಪ್ತಿಯಲ್ಲಿ ಎ.ಡಿ.ಬಿ. ನೆರವಿನೊಂದಿಗೆ ಒಳಚರಂಡಿ ನಿರ್ಮಾಣ ಮಾಡಿದ್ದು ವೆಂಕಟಾಪುರದಲ್ಲಿರುವ ಟ್ರೀಟ್ಮೆಂಟ್ ಪ್ಲಾಂಟ್ಗೆ ಇಲ್ಲಿನ ಗೌಸಿಯಾ ಸ್ಟ್ರೀಟ್ನಲ್ಲಿ ನಿರ್ಮಿಸಿದ ಜಾಕ್ವೆಲ್ ನಿಂದ ಮಲಿನ ನೀರನ್ನು ಪಂಪ್ ಮಾಡಿ ಕಳುಹಿಸಬೇಕಾಗಿದೆ. ಇಲ್ಲಿ ಅಳವಡಿಸಿದ್ದ ಪಂಪ್, ಅದಕ್ಕೆ ಪೂರಕವಾಗಿ ಅಳವಡಿಸಿದ್ದ ಜನರೇಟರ್ ಕೆಲಸ ಮಾಡಿದ್ದೇ ಕಡಿಮೆ ಅವಧಿ ಎಂದರೂ ತಪ್ಪಾಗಲಿಕ್ಕಿಲ್ಲ. ಸದಾ ಒಂದಿಲ್ಲೊಂದು ತೊಂದರೆಯಿಂದಾಗಿ ಪಂಪ್ನಿಂದ ಕಲುಷಿತ ನೀರು ಮೇಲೆತ್ತದೇ ಇರುವುದರಿಂದ ಸಂಗ್ರಹವಾದ ನೀರು ನೇರವಾಗಿ ಶರಾಬಿ ಹೊಳೆಯನ್ನು ಸೇರುತ್ತದೆ. ಅತ್ತ ಕಲುಷಿತಗೊಂಡ ನದಿಯನ್ನು ಸ್ವಚ್ಚ ಮಾಡಲು ಕೇಂದ್ರ ಸರಕಾರ ಹೊರಟರೆ, ಇತ್ತ ನೀರನ್ನು ಕಲುಷಿತಗೊಳಿಸಲು ಪೈಪೋಟಿಗಿಳಿದವರಂತೆ ನೀರನ್ನು ನದಿಗೆ ಹರಿಸುತ್ತಿರುವುದು ಪರಿಸ್ಥಿತಿಯ ವಿಡಂಬನೆಯಾಗಿದೆ. ಪುರಸಭೆಯಿಂದ ಅಸಮರ್ಪಕ ನರ್ವಹಣೆಯೇ ಇದಕ್ಕೆ ಕಾರಣವಾಗಿದ್ದು ಈ ಭಾಗದ ಜನತೆ ಒಳಚರಂಡಿಯ ಜಾಕ್ವೆಲ್ನಿಂದಾಗಿ ವಾಸಿಸುವದೇ ಕಷ್ಟಕರವಾಗಿದೆ. ಸಂಪೂರ್ಣ ಗೌಸಿಯಾ ಸ್ಟ್ರೀಟ್ ವಾಸನೆಮಯವಾಗಿದ್ದು ಈಗಾಗಲೇ ಅನೇಕರು ಈ ಭಾಗದಲ್ಲಿರುವ ಮನೆಯನ್ನು ಬಿಟ್ಟು ಬೇರೆ ಕಡೆಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದರೆ ಪರಿಸ್ಥಿತಿಯ ನಿಜಸ್ಥಿತಿ ಅರಿವಾಗುವುದು.
ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ತಂಜೀಮ್, ವಿವಿಧ ಸಂಘ ಸಂಸ್ಥೆಗಳು ಶರಾಬಿ ಹೊಳೆಗೆ ಹೋಗುತ್ತಿರುವ ಮಲಿನ ನೀರು ನಿಲ್ಲಿಸುವಂತೆ ಮಾಡಿದ ಮನವಿ, ಪ್ರತಿಭಟನೆಗಳು ಯಾವುದೂ ಪ್ರಯೋಜನವಾಗಿಲ್ಲ. ಇಂದಿಗೂ ಕೂಡಾ ಮಲಿನ ನೀರು ನೇರವಾಗಿ ಹೊಳೆ ಸೇರುತ್ತಿರುವುದರಿಂದ ಶರಾಬಿ ಹೊಳೆ ನೀರು ಸಂಪೂರ್ಣ ಹಾಳಾಗಿದೆ. ಅಲ್ಲದೇ ಹೊಳೆ ಪಾತ್ರದಲ್ಲಿ ಸಂಪೂರ್ಣ ಗಬ್ಬು ವಾಸನೆ ಬರುತ್ತಿದ್ದು ಜನ ವಾಸ್ತವ್ಯ ಮಾಡುವುದೇ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಶರಾಬಿ ಹೋಳೆಯ ಹೂಳೆತ್ತುವ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಭರವಸೆ: ಕಳೆದ ವರ್ಷ ವ್ಯಕ್ತಿಯೋರ್ವ ಕೊಚ್ಚಿಕೊಂಡು ಹೋಗಿದ್ದರಿಂದ ಜನತೆ ಭಯಭೀತರಾಗಿದ್ದರು. ಈ ಕುರಿತು ಉಸ್ತುವಾರಿ ಸಚಿವರು ಭಟ್ಕಳಕ್ಕಾಗಮಿಸಿ ಸಭೆ ನಡೆಸಿದ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಶರಾಬಿ ಹೊಳೆಯ ಹೂಳೆತ್ತುವ ಕುರಿತು ತೀವ್ರ ಒತ್ತಡ ತಂದಿದ್ದರು. ಸಭೆಯಲ್ಲಿದ್ದ ಶಾಸಕ ಮಂಕಾಳ ವೈದ್ಯ ಕೂಡಾ ಧ್ವನಿಗೂಡಿಸಿ ಕಾರ್ಯವನ್ನು ಮಾಡುವ ಕುರಿತು ಭರವಸೆಯನ್ನು ನೀಡಿದ್ದು ತಕ್ಷಣ ಅಂದಾಜು ಪತ್ರವನ್ನು ತಯಾರಿಸಿ ಕಳುಹಿಸುವಂತೆ ಸೂಚಿಸಿದ್ದರು. ಇನ್ನೂ ಕೂಡಾ ಯಾವುದೇ ಕ್ರಮವಾಗಿರುವ ಕುರಿತು ತಿಳಿದು ಬಂದಿಲ್ಲ. ಶರಾಬಿ ಹೊಳೆಯ ಹೂಳೆತ್ತದೇ ಮಲಿನ ನೀರು ನಿಂತಿರುವುದರಿಂದ ಇಲ್ಲಿನ ನಾಗರೀಕರು ನರಕಯಾತನೆ ಅನುಭವಿಸುತ್ತಿದ್ದು ತಕ್ಷಣ ಹೂಳೆತ್ತುವ ಕಾರ್ಯ ಮಾಡುವುದರೊಂದಿಗೆ ಮಲಿನ ನೀರು ನದಿಗೆ ಸೇರುವುದನ್ನು ತಡೆಯಬೇಕಾಗಿದೆ.
Leave a Comment