ಕಾರವಾರ:
ನಗರದ ತ್ಯಾಜ್ಯಗಳೆಲ್ಲ ಸೇರುವ ಕೋಣೆನಾಲದ ಹೂಳೆತ್ತಿದ ನಗರಸಭೆಯು ನೇರವಾಗಿ ಟ್ಯಾಗೋರ್ ಕಡಲ ತೀರದಲ್ಲಿ ಸುರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಕೋಟಿ ಕೋಟಿ ರೂಗಳನ್ನು ಖರ್ಚು ಮಾಡಿ ಕಡಲ ತೀರಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಅದರಂತೆ ಜಿಲ್ಲಾಡಳಿತ ಕೂಡ ನಗರದ ಟ್ಯಾಗೋರ್ ಕಡಲ ತೀರವನ್ನು ಸ್ವಚ್ಛಗೊಳಿಸಲು ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಅಲ್ಲದೆ ಹಲವು ಸಂಘ- ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೂಡ ನಡೆಸುತ್ತಿದೆ. ಆದರೆ ಸ್ವಚ್ಛತೆಯ ಪರಿಪಾಲಕ ಎಂದೇ ಖ್ಯಾತಿ ಪಡೆದ ನಗರಸಭೆ ಕೋಣೆನಾಲದ ತ್ಯಾಜ್ಯದ ಹೂಳನೆಲ್ಲ ಕಡ ತೀರದಲ್ಲಿ ಸುರಿಯುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಮಸಿ ಬಳಿಯುವ ಕಾರ್ಯ ಮಾಡುತ್ತಿದೆ ಎಂಬ ಆರೋಪ ಪ್ರಜ್ಞಾವಂತ ನಾಗರಿಕರಿಂದ ವ್ಯಕ್ತವಾಗಿದೆ.
ಮಳೆಗಾಲದ ಮುನ್ನ ನಗರಸಭೆಯು ಪ್ರತಿವರ್ಷ ಟೆಂಡರ್ ಕರೆದು ಗುತ್ತಿಗೆ ನೀಡಿ ಕೋಣೆನಾಲಾ ಸ್ವಚ್ಚ ಮಾಡುತ್ತಿತ್ತು. ಆದರೆ ಈ ಬಾರಿ ನಗರಸಭೆ ಭಿನ್ನ ಧೋರಣೆ ಅನುಸರಿಸಿ ತಾನೇ ಸ್ವತಃ ಕೋಣೆನಾಲಾ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಹೀಗಾಗಿ ಕೋಣೆನಾಲಾದಿಂದ ತೆಗೆದ ತ್ಯಾಜ್ಯ ಭರಿತ ಹೂಳನ್ನು ಸುಂದರ ಕಡಲತೀರದಲ್ಲೆ ಸುರಿದು ಬೀಚ್ ಸೌಂದರ್ಯವನ್ನು ಹಾಳುಗೆಡುವ ಕಾರ್ಯ ಮಾಡಿದೆ. ನಗರದ ಹೆಬ್ಬಾಗಿಲಿನಂತಿರುವ ಲಂಡನ್ ಬ್ರೀಜ್ ಪ್ರದೇಶ ಕಾರವಾರಕ್ಕೆ ಆಗಮಿಸುವ ಪ್ರಯಾಣಿಕರನ್ನು ಬಾಯಿಮುಚ್ಚಿಕೊಂಡು ಕೋಣೆನಾಲಾದ ಘಾಟು ವಾಸನೆಯು ಬರಮಾಡಿಕೊಳ್ಳುತ್ತಿದೆ. ಈ ನಡುವೆ ಈಗ ಕಡಲತೀರದ ಬಿಲ್ಟ್ ಸರ್ಕಲ್ ಸಮೀಪದಲ್ಲಿಯೇ ಕೋಣೆನಾಲಾದ ಕೊಳಕು ಹೂಳು ಕಡಲತೀರದ ಸ್ವಚ್ಛ ಪ್ರದೇಶಗಳಲ್ಲಿ ಡಂಪಿಂಗ್ಯಾರ್ಡ್ನಂತೆ ತಂದು ಸುರಿಯಲಾಗುತ್ತಿದೆ. ಇದರಿಂದ ಇನ್ನಷ್ಟು ಗಬ್ಬು ವಾಸನೆಗೆ ಕಾರಣವಾಗಿದೆ. ಅಲ್ಲದೆ ಸಂಚರಿಸುವ ವಾಹನಿಗರಿಗೆ ಕಿರಿಕಿರಿ ಉಂಟಾಗಿದೆ.
Leave a Comment