ಕಾರವಾರ:
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯೊರ್ವರನ್ನು ಅನಾವಷ್ಯಕವಾಗಿ ಕಚೇರಿಗೆ ಕರೆಯಿಸಿಕೊಂಡು ಮಾನಸಿಕ ಹಿಂಸೆ ನೀಡಿದ ಕುರಿತು ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಂದ್ರ ಮಾರುತಿ ತಿಮ್ಮಾನಿ ಹಾಗೂ ತಹಶೀಲ್ದಾರ್ ದೀನಮಣಿ ಜಿ ಹೆಗಡೆ ವಿರುದ್ದ ನೊಂದ ಮಹಿಳೆ ಭೃಷ್ಟಾಚಾರ ನಿಗ್ರಹದಳ ಮತ್ತು ಜಿಲ್ಲಾಡಳಿತಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ.
ಮಂಗಳವಾರ ಸಂಜೆ ಅಧಿಕಾರಿಗಳು ತಮ್ಮನ್ನು ತಹಶೀಲ್ದಾರ್ ಕಚೇರಿಗೆ ಬರುವಂತೆ ಸೂಚಿಸಿದ್ದು, ಅಲ್ಲಿಗೆ ತೆರಳಿದಾಗ ನಿಂದಿಸಿರುವ ಬಗ್ಗೆ ದೂರು ನೀಡಿದ್ದಾರೆ. ಜಮೀನಿನೊಂದರ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಇದನ್ನು ಇಥ್ಯರ್ಥ ಪಡಿಸುವಂತೆ ಯಾರೊಬ್ಬರೂ ಅಧಿಕಾರಿಗಳಲ್ಲಿ ಮನವಿ ಮಾಡಿಲ್ಲ. ಹೀಗಿರುವಾಗ ಅಧಿಕಾರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ತಮ್ಮ ಎದುರುದಾರರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ರಾಜಿಗೆ ಒಪ್ಪದಿದ್ದಲ್ಲಿ ತಮ್ಮ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾದ ಹಣ ಒದಗಿಸದ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರ ಸಂಜೆ 4.30ರ ವೇಳೆಗೆ ತನ್ನನ್ನು ತಹಶೀಲ್ದಾರ್ ಕಚೇರಿಗೆ ಕರೆಯಿಸಿಕೊಳ್ಳಲಾಗಿದ್ದು, ಬೆದರಿಕೆ ಒಡ್ಡಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುತ್ತವೆ. ಸಾಕ್ಷಿ ನಾಶವಾಗುವ ಮುನ್ನ ಇದನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
Leave a Comment