ಕಾರವಾರ:
ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುವಂತೆ ಜಿಲ್ಲೆಯ ಆಯ್ದ ಗ್ರಾಮ ಲೆಕ್ಕಿಗರಿಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರದಲ್ಲಿ 80ಮಂದಿಗೆ ತರಬೇತಿ ನೀಡಲಾಗಿದೆ.
ಶುಕ್ರವಾರ ಈ ಪ್ರಾಯೋಗಿಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಎರಡು ಬ್ಯಾಚ್ಗಳಲ್ಲಿ ಒಟ್ಟು 80ಮಂದಿಗೆ ತರಬೇತಿಯನ್ನು ನೀಡಲಾಗಿದೆ. ಈಜು, ಕಯಾಕ್ ಮತ್ತು ರಾಫ್ಟ್ ಮೂಲಕ ರಕ್ಷಣೆ ಹಾಗೂ ಚಾಲನಾ ತರಬೇತಿ, ಪ್ರಥಮ ಚಿಕಿತ್ಸೆ ವಿಧಾನ, ಸ್ವರಕ್ಷಣೆ, ಮೋಟಾರ್ ಬೋಟ್ ಚಾಲನಾ ತರಬೇತಿ, ತುಂಬಿ ಹರಿಯುತ್ತಿರುವ ನದಿ ದಾಟುವಿಕೆ (ಫೆರ್ರಿ ಕ್ರಾಸಿಂಗ್) ತರಬೇತಿ, ಹಗ್ಗದ ಮೂಲಕ ರಕ್ಷಣಾ ವಿಧಾನಗಳು, ಯಂತ್ರೋಪಕರಣಗಳು ಹಾಗೂ ಇನ್ನಿತರ ರಕ್ಷಣಾ ಸಾಮಾಗ್ರಿಗಳ ಸಮರ್ಪಕ ನಿರ್ವಹಣಾ ತರಬೇತಿ, ಆಂಕರಿಂಗ್ ವಿಧಾನಗಳು ಸೇರಿದಂತೆ ಅಗತ್ಯ ತರಬೇತಿಯನ್ನು ನೀಡಲಾಗಿದೆ.
ಸತತ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಗ್ರಾಮಗಳ ಗ್ರಾಮಲೆಕ್ಕಿಗರು ಹಾಗೂ ಆಯ್ದ ಕಂದಾಯ ಅಧಿಕಾರಿಗಳಿಗೆ ಅಗತ್ಯ ಜೀವರಕ್ಷಣಾ ತರಬೇತಿಯನ್ನು ಜಿಲ್ಲಾಡಳಿತದ ಮೂಲಕ ನೀಡಲಾಗುತ್ತಿದೆ. ಮೊದಲ ವರ್ಷ 60ಮಂದಿಗೆ ಹಾಗೂ ಕಳೆದ ವರ್ಷ ಎರಡು ಬ್ಯಾಚ್ಗಳಲ್ಲಿ 80ಮಂದಿಗೆ ತರಬೇತಿಯನ್ನು ನೀಡಲಾಗಿತ್ತು.
ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಳ್ಳಲು ಹಾಗೂ ಗ್ರಾಮಮಟ್ಟದಲ್ಲಿ ಕಂದಾಯ ಇಲಾಖಾ ಅಧಿಕಾರಿ ಸಿಬ್ಬಂದಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಇಂತಹ ಪ್ರಾಯೋಗಿಕ ತರಬೇತಿ ಪೂರಕವಾಗಿದೆ. ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯಲ್ಲಿ ಮಾತ್ರ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಈ ರೀತಿಯ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹೇಳಿದ್ದಾರೆ.
ರಕ್ಷಣಾ ತರಬೇತಿ ನೀಡಲು ಸದಾಶಿವಗಢ ಬಳಿಯ ಕಾಳಿ ನದಿ ತೀರ ಅತ್ಯುತ್ತಮ ತಾಣವಾಗಿದ್ದು, ನಾಲ್ಕು ದಿನಗಳ ಕಾಲ ವಿವಿಧ ರೀತಿಯ ರಕ್ಷಣಾ ಕಾರ್ಯಾಚರಣೆ ತರಬೇತಿಯನ್ನು ನೀಡಿ ಅವರಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣವನ್ನು ಬೆಳೆಸುವ ಕಾರ್ಯ ಮಾಡಲಾಗಿದೆ ಎಂದು ತರಬೇತಿಯ ಉಸ್ತುವಾರಿ ವಹಿಸಿದ್ದ ಕರಾವಳಿ ದೋಣಿ ವಿಹಾರ ಮತ್ತು ಸಾಹಸಿ ಕೇಂದ್ರದ ಪ್ರಕಾಶ ಹರಿಕಂತ್ರ ಹೇಳಿದ್ದಾರೆ.
ನಾಲ್ಕು ದಿನಗಳ ಪ್ರಾಯೋಗಿಕ ತರಬೇತಿ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕುಮಟಾ ಹೆರವಟ್ಟಾ ಗ್ರಾಮಲೆಕ್ಕಾಧಿಕಾರಿ ಸಂತೋಷ ಎನ್.ಆರ್. ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಂದ್ರಕಾಂತ ಕೆ ಹರಿಕಂತ್ರ, ವಿನೋದ, ಜಯರಾಮ ಹರಿಕಂತ್ರ, ಜಗದೀಶ್ ಹರಿಕಂತ್ರ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
Leave a Comment