ಕಾರವಾರ: ಜಲ ಮಂಡಳಿಯಿಂದ ನಗರಸಭೆಗೆ ಬಂದ ನೀರಿನ ಬಿಲ್ ಆರು ಕೋಟಿ ದಾಟಿದ್ದು, ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಲ್ ಬಗ್ಗೆ ಶಂಕೆ ವ್ಯಕ್ತವಾಯಿತು. ನಗರದಲ್ಲಿ ನೀರು ಪೂರೈಕೆಯೇ ಸರಿಯಾಗಿರದಿರುವಾಗ ದುಬಾರಿ ಬಿಲ್ ಬಂದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ನಾಮನಿರ್ದೇಶಿತ ಸದಸ್ಯ ಸಂತೋಷ ಗುರುಮಠ ಆಗ್ರಹಿಸಿದರು.
ಸದಸ್ಯ ಸಂದೀಪ ತಳ್ಳೇಕರ್ ಮಾತನಾಡಿ, ಜೂನ್ ತಿಂಗಳಿನಲ್ಲಿ ನಗರಸಭೆಗೆ 14 ಲಕ್ಷ ನೀರಿನ ಬಿಲ್ ಬಂದಿದೆ. ಮಳೆಗಾಲದಲ್ಲಿಯೂ ಇಷ್ಟೊಂದು ಬಿಲ್ ಬಂದಿದೆ ಎಂದರೆ ನಂಬಲು ಅಸಾಧ್ಯ ಎಂದರು. ಅಳತೆ ಮಾಡುವ ಯಂತ್ರದಲ್ಲಿ ದೋಷ ಇರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಸಿ ಯೋಗೇಶ್ವರ್, ದುಬಾರಿ ಬಿಲ್ ಬಂದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು ಅಳತೆ ಮಾಡುವ ಯಂತ್ರ ಪರಿಶೀಲಿಸಿ ದೃಡಿಕರಣಕ್ಕಾಗಿ ಸರ್ಕಾರಕ್ಕೆ ಕಳುಹಿಸಿದೆ ಎಂದು ಹೇಳಿದರು. ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದ 36 ಪ್ರಕರಣಗಳನ್ನು ಕಡಿತ ಮಾಡಲಾಗಿದೆ. ಅದಾಗಿಯೂ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದರು ಹೇಳಿದರು.
ಇನ್ನು ನಗರಸಭೆ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ಗುತ್ತಿಗೆ ಪಡೆದವರಿಗೆ ವಿವಿಧ ಷರತ್ತು ವಿಧಿಸಲಾಗಿದೆ. ಆದರೆ, ಅದನ್ನು ಪಾಲನೆ ಮಾಡದವರಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತು. ನಿರ್ವಹಣೆ ಗುತ್ತಿಗೆ ಪಡೆದವರು 2ಕಡೆ ಕಚೇರಿ, 2 ವಾಹನ, ದೂರವಾಣಿ ಹೊಂದಿರಬೇಕು. ಆದರೆ ಈ ಆದೇಶ ಪಾಲನೆಯಾಗಿಲ್ಲ ಎಂದು ಸಂದೀಪ ತಳ್ಳೇಕರ್ ಆರೋಪಿಸಿದರು. ಇದಲ್ಲದೇ ಹೊರಭಾಗದವರಿಗೆ ಮಾತ್ರ ಅಭಿವೃದ್ದಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ನಗರದಲ್ಲಿ ದೊಡ್ಡ ದೊಡ್ಡ ಮನೆ ನಿರ್ಮಿಸಿಕೊಂಡವರಿಗೆ ಶುಲ್ಕ ಅನ್ವಯವಾಗುತ್ತಿಲ್ಲ ಎಂದು ಗಮನಕ್ಕೆ ತಂದರು. ಸ್ಥಾಯಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಬಿಲ್ ಆಗಿದ್ದು, ಕಾಮಗಾರಿ ನಡೆದಿಲ್ಲ ಎಂದು ಗಣಪತಿ ಉಳ್ವೇಕರ್ ಅಸಮಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಮುಂದಿನ ಸಭೆಯಲ್ಲಿ ವಿವರಣೆ ನೀಡುವದಾಗಿ ಪೌರಾಯುಕ್ತರು ತಿಳಿಸಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್, ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಸಾವಂತ ಇತರರಿದ್ದರು.
Leave a Comment