ಕಾರವಾರ: ವಿವಿಧ ನೌಕರಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಈಚೆಗೆ ಖಾಲಿ ಹೊಡೆಯುತ್ತಿದೆ. ನಿರುದ್ಯೋಗದ ಸಂಖ್ಯೆ ಹೆಚ್ಚುತ್ತಿದ್ದರೂ ಉದ್ಯೋಗ ನೊಂದಣಿ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ನೋಂದಣಿ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಪ್ರಸ್ತುತ ವಿವಿಧ ವಿದ್ಯಾರ್ಹತೆ ಪಡೆದವರಾರೂ ಉದ್ಯೋಗ ವಿನಿಮಯ ಕೇಂದ್ರಲ್ಲಿ ನೋಂದಣಿಗೆ ಬರುತ್ತಿಲ್ಲ. ಹೀಗಾಗಿ ಇಲಾಖೆಗೆ ಸರಕಾರಕ್ಕೆ ನೀಡಿದ ಗುರಿ ಸಾಧನೆಯು ತಲುಪುತ್ತಿಲ್ಲ. 1958 ರಲ್ಲಿ ಪ್ರಾರಂಭಗೊಂಡಿರುವ ಈ ಉದ್ಯೋಗ ಕೇಂದ್ರದಲ್ಲಿ ಹಿಂದೆ ವರ್ಷಕ್ಕೆ ಸುಮಾರು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ನೊಂದಣಿ ಮಾಡಿಕೊಳ್ಳುತ್ತಿದ್ದರು. ಪ್ರಸ್ತುತ ವರ್ಷಕ್ಕೆ 3 ಸಾವಿರ ಮಾತ್ರ ದಾಖಲೆಯಾಗುತ್ತಿವೆ. ಎಸ್ಸೆಸ್ಸಲ್ಸಿ, ಪಿಯುಸಿ ಫಲಿತಾಂಶ ಹೊರಬಂದ ನಂತರ ವಿದ್ಯಾರ್ಥಿಗಳು ಜಿಲ್ಲಾ ಉದ್ಯೋಗ ಕೇಂದ್ರದ ಮುಂದೆ ಹೆಸರು ನೋಂದಾಯಿಸಲು ಸಾಲು ಸಾಲಾಗಿಯೇ ನಿಲ್ಲುತ್ತಿದ್ದರು. ಅದರಂತೆ ಪಿಯುಸಿ, ಪದವಿ ಪಡೆದ ಬಳಿಕವೂ ವಿದ್ಯಾರ್ಥಿಗಳು ತಮ್ಮ ಪ್ರಮಾಣ ಪತ್ರಗಳನ್ನು ಉದ್ಯೋಗ ವಿನಿಯಮ ಕೇಂದ್ರದಲ್ಲಿ ಮೂರು ವರ್ಷಕ್ಕೆ ನವೀಕರಣ ಮಾಡಿಕೊಳ್ಳುತ್ತಿದ್ದರು. ಸದ್ಯ ಅಧಿಕಾರಿಗಳ ಕೊರೆತೆಯ ಜೊತೆ ಜತೆಗೆ ನೋಂದಣಿ ಸಾಧನೆಯು ಸಂಪೂರ್ಣವಾಗಿ ಕುಂಟಿತವಾಗಿದೆ.
ಎಸ್ಸಿ, ಎಸ್ಟಿ, ಪ್ರವರ್ಗ 1, ಒಬಿಸಿ, ಸೇರಿದಂತೆ ಸಾಮಾನ್ಯ ವರ್ಗಗಳನ್ನು ವಿಭಾಗಿಸಿ ನೋಂದಣಿ ಮಾಡಿಕೊಳ್ಳಲಾಗುತ್ತಿದ್ದವು. ನೊಂದಾಯಿತ ಅಭ್ಯರ್ಥಿಗಳನ್ನು ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಸಂದರ್ಶನಕ್ಕೆ ಕಳಿಸಲಾಗುತ್ತಿತ್ತು. ಅದೇ ಪ್ರಕಾರ ಇಲಾಖೆಯಿಂದ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಲು ಮಾಹಿತಿಗಳನ್ನು ನೋಟಿಸ್ಗೆ ಹಾಕಲಾಗುತ್ತಿದ್ದವು. ನಿರುದ್ಯೋಗಿ ಯುವಕರಿಗೆ ಉದ್ಯೋಗದ ಬಗ್ಗೆ ಮಾರ್ಗದರ್ಶನ ಮಾಡಬೇಕಾದ ಉದ್ಯೋಗ ಕೇಂದ್ರದಲ್ಲಿಯೇ ಉದ್ಯೋಗ ನೊಂದಣಿ ಅಧಿಕಾರಿ ಹುದ್ದೆ ಖಾಲಿ ಇದೆ. ಉದ್ಯೋಗ ನೋಂದಣಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದವರಿಗೆ ಮೊದಲಿನಂತೆ ಯಾವ ಪ್ರಯೋಜನಗಳು ದೊರೆಯುತ್ತಿಲ್ಲ.
ಮೊದಲು ಪೊಲೀಸ್, ಅಧಿಕಾರಿ, ಅರಣ್ಯ ಸಾರಿಗೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇಲ್ಲಿ ನೋಂದಣಿ ಮಾಡಿದ ನಿರುದ್ಯೋಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಆದರೆ 1995ರ ನಂತರ ಈ ಕಾಯಕ ಕುಂಠಿತವಾಗುತ್ತಿದೆ. 1996ರಲ್ಲಿ ಹೊರಬಿದ್ದ ಸುಪ್ರಿಂ ಕೋರ್ಟ್ ಆದೇಶದಂತೆ ಬಹುತೇಕ ಎಲ್ಲ ಇಲಾಖೆಗಳು ಮತ್ತು ಕೈಗಾರಿಕೆಗಳು ತಮ್ಮಲ್ಲಿನ ಉದ್ಯೋಗ ಅವಕಾಶಗಳ ಜಾಹಿರಾತುಗಳನ್ನು ಮುಕ್ತವಾಗಿ ಎಲ್ಲ ಪತ್ರಿಕೆಗಳಿಗೆ ನೀಡಲಾಗುತ್ತಿದೆ. ಜಾಹಿರಾತನ್ನು ನೋಡಿಕೊಂಡು ನೇರವಾಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಲ್ಲದೆ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ಪ್ರಕ್ರಿಯೇ ಜಾರಿಯಲ್ಲಿದ್ದರಿಂದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಮಾಡುವವರ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ.
ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್ಡಿ) ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಈ ಹಿಂದೆ ಸರಕಾರ ಘೋಷಿಸಿತ್ತು ಮೊದಲ ಹಂತದಲ್ಲಿ ಕಲಬುರಗಿ, ಬಳ್ಳಾರಿ, ಹುಬ್ಬಳ್ಳಿ, ಕೋಲಾರ, ವಿಜಯಪುರ, ಮಂಡ್ಯ, ಚಾಮರಾಜನಗರ, ಮಂಗಳೂರು ಹಾಗೂ ಎರಡನೇ ಹಂತದಲ್ಲಿ ರಾಮನಗರ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ಬಾಗಲಕೋಟೆ, ಕೊಪ್ಪಳ ಮತ್ತು ಮೂರನೇ ಹಂತದಲ್ಲಿ ಉಳಿದೆಲ್ಲ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಎಚ್ಆರ್ಡಿ ಕೇಂದ್ರಗಳಾಗಿ ಪರಿವರ್ತಿಸುವ ಉದ್ದೇವನ್ನು ಸರಕಾರ ಹೊಂದಿದೆ.
ಈ ಕೇಂದ್ರಗಳಿಗೆ ಸೂಕ್ತ ಸಿಬ್ಬಂದಿ ನೇಮಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಕೇಂದ್ರಗಳ ಮೂಲಕ ನಿರುದ್ಯೋಗಿ ಅಭ್ಯರ್ಥಿಗಳ ನೋಂದಣಿ ಮತ್ತು ಕೌನ್ಸೆಲಿಂಗ್, ಸೂಕ್ತ ಕೌಶಲ್ಯ ತರಬೇತಿಗಳನ್ನು ನಡೆಸಲಾಗುತ್ತದೆ. ಕಂಪ್ಯೂಟರ್ ಟ್ಯಾಲಿ, ಸಾಫ್ಟ್ ಸ್ಕಿಲ್ಸ್, ಕಮ್ಯೂನಿಕೇಷನ್ ಇಂಗ್ಲಿಷ್ ಮೊದಲಾದ ತರಭೇತಿ ನೀಡಲಾಗುತ್ತದೆ. ಖಾಸಗಿ ಕಂಪನಿಗಳ ನೋಂದಣಿ ಮಾಡುವುದರೊಂದಿಗೆ ಅಭ್ಯರ್ಥಿಗಳ ವಿದ್ಯಾಭ್ಯಾಸಕ್ಕೆ ನುಗುಣವಾಗಿ ಮಿನಿ ಮತ್ತು ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ರಾಜ್ಯದಲ್ಲಿ 2020ನೇ ಇಸವಿ ವೇಳೆಗೆ 15 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಸರಕಾರ ಹೊಂದಿದೆ.
Leave a Comment