ಹೊನ್ನಾವರ:”ಸಂಗೀತ,ಸಾಹಿತ್ಯ,ಚಿತ್ರಕಲೆ ಮೊದಲಾದ ಹವ್ಯಾಸಗಳಿದ್ದರೆ ವ್ಯಕ್ತಿಯ ವೃತ್ತಿ ಜೀವನಕ್ಕೆ ಇನ್ನಷ್ಟು ಮೆರಗು ಪ್ರಾಪ್ತವಾಗುವ ಜೊತೆಗೆ ಆತನ ಬದುಕು ಸುಂದರವಾಗುತ್ತದೆ’ಎಂದು ಹವ್ಯಾಸಿ ಕರಕುಶಲ ಕಲಾವಿದರೂ ಆಗಿರುವ ಪ್ರೊ.ಪಿ.ಡಿ.ನಾಯ್ಕ ಅಭಿಪ್ರಾಯಪಟ್ಟರು.
33 ವರ್ಷಗಳ ಕಾಲ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗುರುವಾರ ವೃತ್ತಿಯಿಂದ ನಿವೃತ್ತರಾದ ತಮಗೆ ಕಾಲೇಜಿನಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,”ವೃತ್ತಿಯಲ್ಲಿ ನಿಷ್ಠೆ,ವಿದ್ಯಾರ್ಥಿಗಳಲ್ಲಿ ಪ್ರೀತಿ ಹಾಗೂ ಸಹೋದ್ಯೋಗಿಗಳ ಜೊತೆಗಿನ ಸ್ನೇಹ ಶಿಕ್ಷಕನಾಗಿ ತನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ’ಎಂದು ಹರ್ಷ ವ್ಯಕ್ತಪಡಿಸಿದರು.
‘ಧರ್ಮಾಚರಣೆಯಲ್ಲಿ ಅಂಧಶ್ರದ್ಧೆ ಇಟ್ಟುಕೊಳ್ಳುವುದಕ್ಕಿಂತ ಬುದ್ಧ,ಗಾಂಧಿ ಮೊದಲಾದ ಮಹಾತ್ಮರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಬದುಕು ಸಾಗಿಸಬೇಕು.ಕಾರ್ಲಮಾಕ್ರ್ಸನ ದಾಸ್ ಕ್ಯಾಪಿಟಲ್ ಪಾಶ್ಚಿಮಾತ್ಯ ಸಮಾಜಕ್ಕೆ ಪ್ರಗತಿಯ ಮುನ್ನುಡಿ ಬರೆಯಿತು.ಜಾತಿ,ವರ್ಗ ಮೊದಲಾದ ತಾರತಮ್ಯದಿಂದಾಗಿ ಭಾರತೀಯರು ಪಾಶ್ಚಿಮಾತ್ಯರಿಗಿಂತ ವಿಜ್ಞಾನ ಹಾಗೂ ತಂತ್ರಜ್ಞಾನ ಸೇರಿದಂತೆ ಅಭಿವೃದ್ಧಿಯಲ್ಲಿ ಕನಿಷ್ಠ 100 ವರ್ಷಗಳಷ್ಟು ಹಿಂದುಳಿಯುವಂತಾಗಿದೆ.ಜಾತಿಯ ಸಣ್ಣತನವನ್ನು ಮೀರಿದ ವಿಚಾರವಾದದ ಅವಶ್ಯಕತೆಯಿದೆ’ಎಂದು ಹೇಳಿದ ಅವರು ವೃತ್ತಿಯಲ್ಲಿ ತಮಗೆ ಸಹಕರಿಸಿದ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ,”ವೃತ್ತಿಯಲ್ಲಿ ನಿಷ್ಠೆ ತೋರುವ ವ್ಯಕ್ತಿಯನ್ನು ಸಂಸ್ಥೆ ಹಾಗೂ ಸಮಾಜ ಗೌರವಿಸುತ್ತದೆ’ಎಂದು ಹೇಳಿದರು.
ಎಂಪಿಇ ಸೊಸೈಟಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಭಟ್ಟ,ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಚ್.ಭಟ್ಟ,ಸಿಬ್ಬಂದಿಗಳು ನಿವೃತ್ತರಿಗೆ ಶುಭ ಕೋರಿದರು.
ಪ್ರೊ.ಪಿ.ಡಿ.ನಾಯ್ಕ ಹಾಗೂ ಅವರ ಪತ್ನಿ ಡಾ.ವಾಹಿನಿ ಅವರನ್ನು ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ ಸನ್ಮಾನಿಸಿದರು.
ಪ್ರೊ.ಕೆ.ಆರ್.ಶ್ರೀಲತಾ ಪ್ರಾರ್ಥನಾ ಗೀತೆ ಹಾಡಿದರು.ಪ್ರೊ.ನಾಗರಾಜ ಹೆಗಡೆ ಅಪಗಾಲ,ಪ್ರೊ.ಲತಾ ಆರ್.ನಿರೂಪಿಸಿದರು.ಪ್ರೊ.ಸಂಜೀವ ನಾಯಕ ಸ್ವಾಗತಿಸಿದರು.ಡಾ.ಡಿ.ಎಲ್.ಹೆಬ್ಬಾರ ವಂದಿಸಿದರು.
Leave a Comment