ಹೊನ್ನಾವರ: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಪ್ರತಿಬಾರಿ ಸಭೆಗೆ ಹಾಜರಾಗದೇ ಇರುವುದರಿಂದ ಆಕ್ರೋಶಗೊಂಡ ಸದಸ್ಯರು ಚರ್ಚಿಸಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು.
ತಾ.ಪಂ.ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಗೆ ಏಕೆ ಬರಲಿಲ್ಲ? ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿತ್ತು. ತಾಲೂಕಿನಲ್ಲಿ ಮಟಕಾ, ಕಳ್ಳಭಟ್ಟಿ ಸರಾಯಿ ಎಗ್ಗಿಲ್ಲದೇ ನಡೆಯುತ್ತಿದೆ. ಈ ಬಗ್ಗೆ ಸಭಾಧ್ಯಕ್ಷರು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಉತ್ತರಿಸಿದ ತಾ. ಪಂ. ಅಧ್ಯಕ್ಷ ಉಲ್ಲಾಸ ನಾಯ್ಕ, ಈ ಹಿಂದಿನ ಸಾಮಾನ್ಯ ಸಭೆಗಳಲ್ಲಿ ಗೈರಾದ ಅಧಿಕಾರಗಳ ವಿರುದ್ಧ ಠರಾವು ಮಂಡಿಸಿ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಳಿಸಲಾಗಿದೆ ಆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಿದರು. ಇದಕ್ಕೆ ಸಮಾಧಾನಗೊಳ್ಳದ ಸದಸ್ಯರು ಇಲಾಖೆ ಅಧಿಕಾರಿಗಳು ಇಲ್ಲದೇ ಸಾಮಾನ್ಯ ಸಭೆ ನಡೆಸುವುದು ಯಾವ ಪುರುಷಾರ್ಥಕ್ಕಾಗಿ ಎಂದು ಆಕ್ರೊಶ ವ್ಯಕ್ತಪಡಿಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಂ.ವಿ.ಹೆಗಡೆ ಮಾತನಾಡಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಅಬಕಾರಿ, ಹೊನ್ನಾವರ ಸಿಪಿಐ, ಸಾರಿಗೆ ಅಧಿಕಾರಿ, ಎಪಿಎಂಸಿ ಕಾರ್ಯದರ್ಶಿ, ಚಿಕ್ಕನೀರಾವರಿ ಎಇಇ, ಕೆಎಫ್ಡಿ ಅಧಿಕಾರಿ, ವಲಯ ಅರಣ್ಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿ, ಯೋಜನಾಧಿಕಾರಿ, ಕೈಗಾರಿಕಾ ವಿಸ್ತರಣಾಧಿಕಾರಿ, ಭೂಮಾಪನಾ ಇಲಾಖೆ, ನಿರ್ಮಿತಿ, ಕೆಪಿಸಿ, ಪಿಎಂಜಿಎಸ್ವೈ, ದೇವರಾಜ ಅರಸು ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಭೆಗೆ ಹಾಜರಾಗಿಲ್ಲ.
ಈ ಹಿಂದೆ ಠರಾವು ಮಂಡಿಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರೂ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಲು ನಾವೆಲ್ಲರು ಸಾಮುಹಿಕವಾಗಿ ಸಭಾತ್ಯಾಗ ನಡೆಸೊಣ ಎಂದು ಸದಸ್ಯರು ಸಭೆಯಿಂದ ಹೊರನಡೆದರು.
ಸದಸ್ಯರಾದ ಗಣಪಯ್ಯ ಗೌಡ, ಆರ್.ಪಿ.ನಾಯ್ಕ, ಲೋಕೇಶ ನಾಯ್ಕ, ಅಣ್ಣಯ್ಯ ನಾಯ್ಕ, ಗಾಯತ್ರಿ ನಾಯ್ಕ, ಕಮಲಾ ಮಂಜುನಾಥ ಹಳ್ಳೇರ, ರೂಪಾ ಹೊಸಬು ಗೌಡ, ಲಕ್ಷ್ಮೀ ಗೊಂಡ ಹಾಗೂ ಇತರ ಸದಸ್ಯರು ಇದ್ದರು.
Leave a Comment