ಹೊನ್ನಾವರ: ಪಟ್ಟಣದ ಶರಾವತಿ ಸರ್ಕಲ್ ಬಳಿ ಅನ್ಯಕೋಮಿನವರ ಬೈಕ್ ಮತ್ತು ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿತ್ತು. ನಂತರ ಮಾತಿನ ಚಕಮಕಿ ನಡೆದು ನಂತರ ಟೇಂಪೋ-ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಬುಧವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ಒಮ್ಮಲೆ ಕಲ್ಲು, ಬಾಟಲಿ ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಎರಡು ಕೋಮಿನವರ ನಡುವೆ ತಡರಾತ್ರಿ ಘರ್ಷಣೆ ಉಂಟಾಯಿತು. ತಡರಾತ್ರಿ ಎರಡು ಕೋಮಿನ 43 ಜನರನ್ನು ಬಂಧಿಸಲಾಗಿದೆ. ಈ ಘಟನೆಯ ಹಿನ್ನಲೆ ಪಟ್ಟಣದ ದುರ್ಗಾಕೇರಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆಯವರು ಜಮಾಯಿಸಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ವಿ.ಆರ್.ಗೌಡ ಭೇಟಿ ನೀಡಿ ಸಭೆ ನಡೆಸಿದರು. ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಯ ಪ್ರಮುಖರು ಮಾತನಾಡಿ ಬುಧವಾರ ರಾತ್ರಿ ಬೈಕ್ನಲ್ಲಿ ಹೋದ ಪಟ್ಟಣದ ತುಳಸೀನಗರದ ಯುವಕ ಪರೇಶ್ ಮೇಸ್ತ (20) ಎಂಬಾತ ನಾಪತ್ತೆಯಾಗಿದ್ದು, ಈತನನ್ನು ತಕ್ಷಣ ಪತ್ತೆಹಚ್ಚಬೇಕು. ಆತ ಎಲ್ಲಿದ್ದಾನೆ ಎಂಬುದು ಗೊತ್ತಾಗಬೇಕಿದೆ. ಆತನು ಹೋದ ಬೈಕ್ನಲ್ಲಿ ಮೊಬೈಲ್ ಸಿಕ್ಕಿದೆ. ನಮಗೆ ಈಗ ಆತನನ್ನು ಅಪಹರಿಸಿರಬಹುದು ಎಂಬ ಆತಂಕವುಂಟಾಗಿದೆ. ಶ್ರೀ ಶನೇಶ್ಚರ ದೇವಾಲಯದ ಎದುರುರಿನಲ್ಲಿರುವ ಸರ್ಕಾರಿ ಜಾಗದ ಪಹಣಿ ಪತ್ರಿಕೆಯಲ್ಲಿ `ಮೊಹರಂ ಹಬ್ಬಕ್ಕೆ ಮುಸ್ಲೀಂರು ಕೂಡಲು ಅವಕಾಶ’ ಎಂದು ದಾಖಲಾಗಿದೆ. ಇದರಿಂದ ಕೆಲವರು ಈ ಸ್ಥಳ ನಮಗೆ ಸೇರಿದ್ದು ಎಂದು ವಿವಾದ ಎಬ್ಬಿಸುತ್ತಿದ್ದಾರೆ. ಆ ಜಾಗವನ್ನು ಸರ್ಕಾರಿ ಜಾಗ ಎಂದು ದಾಖಲಿಸಬೇಕು. ಬಂಧನದಲ್ಲಿದ್ದ ಎಲ್ಲಾ ಅಮಾಯಕ ಹಿಂದೂಗಳನ್ನು ತಕ್ಷಣ ಬುಡುಗಡೆಗೊಳಿಸಬೇಕು. ತಡರಾತ್ರಿ ತಮ್ಮ ಮನೆಯಲ್ಲಿ ಮಲಗಿದವರನ್ನು ಪೊಲೀಸರು ಎಬ್ಬಿಸಿ ಬಂಧಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು. ತಹಸೀಲ್ದಾರ್ ವಿ.ಆರ್.ಗೌಡ ಉತ್ತರಿಸಿ ಪಹಣಿ ಪತ್ರಿಕೆಯ ಗಣಕೀಕರಣದ ವೇಳೆ ತಪ್ಪಾಗಿ ನಮೂದಾಗಿದ್ದು, ಅದನ್ನು ಸರ್ಕಾರಿ ಜಾಗವೆಂದು ದಾಖಲಿಸಲಾಗುವುದು ಮತ್ತು ಕಾನೂನಿನಂತೆ ಬಂಧಿತರನ್ನು ಬಿಡುಗಡೆಗೊಳಿಸಲಾಗುವುದು ಎಂದರು. ಇದಕ್ಕೆ ಒಪ್ಪದ ಸಾರ್ವಜನಿಕರು ಇಂದು ಸಂಜೆಯೊಳಗೆ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಆತಂಕಗೊಂಡ ಮೀನುಗಾರ ಮಹಿಳೆಯರು: ಬುಧವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕ ನಾಪತ್ತೆಯಾಗಿದ್ದು, ಆತನ ಯೋಗಕ್ಷೇಮ ವಿಚಾರಿಸಲು ನೂರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಜಮಾಯಿಸಿ ಯುವಕನನ್ನು ಪತ್ತೆಹಚ್ಚಿ ನಮಗೆ ಒಪ್ಪಿಸುವಂತೆ ಒತ್ತಾಯಿಸಿದರು. ನಾಪತ್ತೆಯಾದ ಯುವಕ ಪರೇಶ್ ಮೇಸ್ತನನ್ನು ಪತ್ತೆ ಹಚ್ಚಿ ಸುಳಿವು ಸಿಗುವಂತೆ ಪ್ರಯತ್ನಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಮಾಜಿ ಶಾಸಕ ದಿನಕರ ಶೆಟ್ಟಿ, ಸುನೀಲ ನಾಯ್ಕ, ಉಮೇಶ ಮೇಸ್ತ, ಶಿವರಾಜ ಮೇಸ್ತ, ನಾಗರಾಜ ನಾಯಕ ತೊರ್ಕೆ, ಲೋಕೇಶ ಮೇಸ್ತ, ಮಹೇಶ ನಾಯ್ಕ, ಸಂತೋಷ ಮೇಸ್ತ, ಸುಬ್ರಾಯ ನಾಯ್ಕ, ರಾಜು ಭಂಡಾರಿ, ಎಸ್.ಎಂ.ನಾಯ್ಕ, ಮೋಹನ ಮೇಸ್ತ ಸೇರಿದಂತೆ ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಘಟನೆಗೆ ಸಂಬಂಧಿಸಿ ಗುರುವಾರ ಹೊನ್ನಾವರ ಪಟ್ಟಣದಲ್ಲಿ ಅಘೋಷಿತ ಬಂದ್ ಆಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸ್ಥಳದಲ್ಲಿ ಬೀಡು ಬಿಟ್ಟು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇವರೊಂದಿಗೆ ಹೊರಜಿಲ್ಲೆಗಳಿಂದ ನಿಯೋಜಿಸಲ್ಪಟ್ಟ ಹಿರಿಯ ಅಧಿಕಾರಿಗಳು ಹಾಗೂ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂಧಿಗಳು ಭದ್ರತೆ ಹಾಗೂ ಶಾಂತಿ ಕಾಪಾಡಲು ನಿಯೋಜಿಸಲಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳು ರಜೆ: ಘಟನೆಯಿಂದ ಅಹಿತಕರ ಘಟನೆ ನಡೆಯುವುದೆಂಬ ಆತಂಕದಿಂದ ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಆತಂಕದ ವಾತಾವರಣ ಇರುವುದರಿಂದ ಸಾರ್ವಜನಿಕಕರು ಹಳ್ಳಿಗಳಿಂದ ಪಟ್ಟಣಕ್ಕೆ ಬರದೇ ಕಚೇರಿಗಳ ಆವರಣ ಬಿಕೋ ಎನ್ನುತ್ತಿತ್ತು. ರಾತ್ರಿ 12 ಗಂಟೆವರೆಗೆ ಟೆಂಪೋ ಚಾಲಕರು, ಮಾಲೀಕರು ಸ್ಥಳಕ್ಕೆ ಬಂದು ತಮ್ಮ ಟೆಂಪೋಗಳಿಗೆ ಹಾನಿಯಾಗಿರುವುದನ್ನು ಗಮನಿಸಿ ಪೊಲೀಸ್ ಠಾಣೆಗೆ ತೆರಳಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಘಟನಾ ಸ್ಥಳದಲ್ಲಿ ಹಾಗೂ ಬಸ್ನಿಲ್ದಾಣದ ಎದುರಿನ ರಸ್ತೆಯಲ್ಲಿ ಕಲ್ಲು, ಗಾಜಿನ ಬಾಟಲಿಗಳು, ಕಬ್ಬಿಣದ ರಾಡು ಬಿದ್ದುಕೊಂಡಿವೆ. ಪಟ್ಟಣದ ಜನರಲ್ಲಿ ಈ ಘಟನೆ ಭಯದ ವಾತಾವರಣವನ್ನು ಸೃಷ್ಟಿಸಿದೆ. ವ್ಯಾಪಾರ ವಹಿವಾಟು ಸ್ಥಗಿತ: ಪಟ್ಟಣದಲ್ಲಿ ದಿನನಿತ್ಯದ ಅಗತ್ಯದ ವಸ್ತುಗಳಿಗೆ ಜನರು ಪರದಾಡುವಂತಾಯಿತು. ಪಟ್ಟಣದಲ್ಲಿ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ಬಂದಾಗಿದ್ದವು. ಇದರಿಂದ ಪಟ್ಟಣಕ್ಕೆ ಆಗಮಿಸಿದ ಗ್ರಾಮೀಣ ಭಾಗದ ಜನರು ಹಾಗೂ ಪಟ್ಟಣದ ಸಾರ್ವಜನಿಕರು ಪರದಾಡುವಂತಾಯಿತು. ಘರ್ಷಣೆಯಿಂದ ಹಲವರಿಗೆ ಗಾಯ: ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದ ಗುಂಪು ಘರ್ಷಣೆಯಿಂದಾಗಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಭೆಯಲ್ಲಿ ಹೊನ್ನಾವರದ ನರಸಿಂಹ ಮೇಸ್ತ ಮತ್ತು ಶರತ್ ಮಹಾಲೆ ಎಂಬ ಇಬ್ಬರು ತೀವೃಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಪೊಲೀಸ್ ಪೇದೆಯ ಕೈಗೆ ಬಲವಾದ ಗಾಯವಾಗಿದೆ. ಹೊನ್ನಾವರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಅವರು ಸೂಕ್ತ ಭದ್ರತೆ ಏರ್ಪಡಿಸಿದ್ದಾರೆ.
Leave a Comment