ಹೊನ್ನಾವರ. ದೇವರು ಡಯಾಲಿಸಿಸ್ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು. ಸೌಲಭ್ಯ ನಮ್ಮಿಂದ ನಮಗಾಗಿಯಾದರೂ ದೊಣ್ಣೆನಾಯಕನ ಅಪ್ಪಣೆ ಬೇಕು ಎಂಬಂತೆ, ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್ ಘಟಕ ಸ್ಥಾಪನೆಯಾಗಿ ಅದರ ಬಳಕೆಗೆ ಅಗತ್ಯದ ಎಲ್ಲ ವ್ಯವಸ್ಥೆಯಿದ್ದರೂ ಕ್ಷೇತ್ರದ ಶಾಸಕರೋ, ಸಚಿವರೋ ಬಂದು ಉದ್ಟಾಟಿಸಲು ಪುರುಸೊತ್ತಿಲ್ಲದೆ ಕಾಯಿಲೆ ಪೀಡಿತರು ಕಾಯುವಂತಾಗಿದೆ.ಈವರೆಗೂ ಇಲ್ಲ, ಇಲ್ಲ ಎಂಬ ಕೂಗುಗಳ ನಡುವೆ ಅಂತೂ ಡಯಾಲಿಸಿಸ್ ಮಂಜೂರಿ ಭಾಗ್ಯ ದೊರೆತು, ತಂತ್ರಜ್ಞರು, ಸಿಬ್ಬಂದಿಗಳು, ವೈದ್ಯರು ಎಲ್ಲ ಇದ್ದರೂ ಈಗ ರೋಗಿಗಳ ಪಾಲಿಗೆ ಅದು ಇದ್ದೂ ಇಲ್ಲದಂತಾಗಿದೆ ಎಂಬ ದೂರು ಸಾರ್ವಜನಿಕವಾಗಿ ಕೇಳಿಬಂದಿದೆ.ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಗೆ ಬಹುವರ್ಷಗಳ ಬೇಡಿಕೆಯ ಫಲವಾಗಿ ಡಯಾಲಿಸಿಸ್ ಘಟಕ ಮಂಜೂರಿ ಆಗಿ, ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕವನ್ನು ತೆರೆಯಲಾಗಿದೆ. ಆದರೆ ಈ ಘಟಕ ಅವಲಂಬಿತ ರೋಗಿಗಳ ಪಾಲಿಗೆ ಮಾತ್ರ ಇನ್ನೂ ಸೇವೆ ಲಭ್ಯವಾಗಿಲ್ಲ. ಏಕೆಂದರೆ ಉದ್ಟಾಟನೆ ಆದ ವಿನಾ ರೋಗಿಗಳ ಬಳಕೆಗೆ ಡಯಾಲಿಸಿಸ್ ಘಟಕವನ್ನು ನೀಡಲಾಗದು. ಸಚಿವರು, ಶಾಸಕರು ಬಂದು ಉದ್ಟಾಟಿಸಿದ ತರುವಾಯವೇ ಈ ಘಟಕಗಳ ಸೇವೆ ರೋಗಿಗಳಿಗೆ ಲಭ್ಯವಾಗಲಿದೆ ಎಂಬ ಉತ್ತರಗಳು ಆಸ್ಪತ್ರೆಯ ಹಜಾರದಲ್ಲಿ ಕೇಳಿಬರತೊಡಗಿದೆ. ಈವರೆಗೂ ಡಯಾಲಿಸಿಸ್ ಅವಲಂಬಿತ ರೋಗಿಗಳು ಚಿಕಿತ್ಸೆಗೆ ಹೊರಜಿಲ್ಲೆಗಳ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಇಲ್ಲವೇ ಜಿಲ್ಲಾ ಕೇಂದ್ರದಲ್ಲಿನ ಆಸ್ಪತ್ರೆಗಳನ್ನು ಅವಲಂಬಿಸುವ ಅನಿವಾರ್ಯತೆಗಳಿತ್ತು. ಈ ಹಿನ್ನಲೆಯಲ್ಲಿ ತಾಲೂಕಾ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಆರಂಭಿಸಬೇಕೆಂಬ ಕೂಗು ಸಾರ್ವಜನಿಕರಿಂದ ಹಲವು ವರ್ಷಗಳಿಂದ ಕೇಳಿಬಂದಿತ್ತು.ಪ್ರಸ್ತುತ ಜಿಲ್ಲೆಯ ಎಲ್ಲ ತಾಲೂಕಾ ಆಸ್ಪತ್ರೆಗಳಿಗೂ ಡಯಾಲಿಸಿಸ್ ಘಟಕವನ್ನು ಸರಕಾರ ಮಂಜೂರಿ ಮಾಡಿದ್ದು, ಒಂದೆರಡು ತಾಲೂಕಾ ಆಸ್ಪತ್ರೆಯಲ್ಲಿ ಮಾತ್ರ ಸ್ಥಳೀಯ ಶಾಸಕರೇ ಉದ್ಟಾಟನೆ ನೆರವೇರಿಸಿ ರೋಗಿಗಳ ಚಿಕಿತ್ಸೆಗೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈ ಹಿಂದೆಯೇ ಅಳವಡಿಸಲಾದ ಡಯಾಲಿಸಿಸ್ ಘಟಕದ ಪ್ರಯೋಜನ ಇನ್ನೂ ರೋಗಿಗಳ ಪಾಳಿಗೆ ಸಿಗುತ್ತಿಲ್ಲ. ಸಚಿವರು ಶಾಸಕರ ಮರ್ಜಿಗಾಗಿ , ಉದ್ಟಾಟನೆಯ ಭಾಗ್ಯಕ್ಕಾಗಿ ಬಳಕೆಗೆ ಬಾರದಿರುವದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಆಸ್ಪದವಾಗಿದೆ.
Leave a Comment