ಹೊನ್ನಾವರ: ಎಲ್ಲಕ್ಕಿಂತ ಮೊದಲಾಗಿ ನಮಗೆ ಶಕ್ತಿಕೊಟ್ಟ ತಂದೆ-
ತಾಯಂದಿರೇ ಆದರ್ಶರಾಗಬೇಕು. ಅವರನ್ನು ನಿರ್ಲಕ್ಷಿಸಿ ಯಾವ ಕೆಲಸ ಮಾಡಿದರೂ ಸಾರ್ಥಕತೆ ಬರಲಾರದು ಎಂದು ಹೆಸರಾಂತ ಕಲಾವಿದ ಓಂ ಗಣೇಶ ಹೇಳಿದರು.
ಅವರು ರಘುಚಂದ್ರ ಸಭಾಗೃಹದಲ್ಲಿ ಜಿಎಸ್ಬಿ ಸಮಾಜದ ಯುವವಾಹಿನಿ ವಾರ್ಷಿಕ ಸಮಾವೇಶದಲ್ಲಿ ಅತಿಥಿಗಳಾಗಿ ಮಾತನಾಡಿದರು. ಹಿರಿಯರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಮಕ್ಕಲಿಗೆ ಸೂತ್ರವಾಗಿ ಅವರ ಸುಸೂತ್ರ ಬೆಳವಣಿಗೆಗೆ ತಮ್ಮ ಕರ್ತವ್ಯ ಎಂದು ಸಹಕರಿಸಬೇಕು. ಅವರಿಂದ ರೂಪುಗೊಂಡ ಯುವಜನಾಂಗ ಶಕ್ತಿಕೊಟ್ಟವರನ್ನು ಆದರ್ಶ ಎಂದು ಭಾವಿಸಬೇಕು. ಸಂಸ್ಕಾರ ಇಲ್ಲದೆ ಹಲವರ ಸಂಸಾರ ಸೂತ್ರತಪ್ಪಿದ ಗಾಳಿಪಟವಾಗುತ್ತಿದೆ. ಬದುಕಿನ ಸಂಗ್ರಾಮದಲ್ಲಿ ಸೋಲದಿರಲು ನಾವು ಬೆಳೆಯುವುದರೊಟ್ಟಿಗೆ ಬಡವರನ್ನು ದತ್ತುಪಡೆದು ಬೆಳೆಸಬೇಕು ಎಂದರು.
ಅತಿಥಿ ಗೋವಾ-ಕರ್ನಾಟಕ ಆದಾಯ ತೆರಿಗೆ ಕಮೀಶನರ್ ಶ್ಯಾಮಸುಂದರ್ ಕಾಮತ್ ಮಾತನಾಡಿ, ಸರಸ್ವತಿ ತೀರದಿಂದ ಬಂದ ಗೌಡಸಾರಸ್ವತರು ಕಾರಣಾಂತರಗಳಿಂದ ಹಂಚಿಹೋಗಿದ್ದರೂ, ಬುದ್ಧಿವಂತಿಕೆ, ಶ್ರಮದ ದುಡಿಮೆ, ಗುರುದೇವತಾ ಭಕ್ತಿಯಿಂದ ದೇಶಕ್ಕೆ ಕೊಡುಗೆಯಾಗಿದ್ದಾರೆ. ಗೆಲುವಿಗೆ ಇದು ಕಾರಣ. ತಂತ್ರಜ್ಞಾನವನ್ನು ಬಳಸಿಕೊಂಡು ಯುವಜನಾಂಗ ಹೆಚ್ಚು ಸಾಧನೆ ಮಾಡಬೇಕು ಎಂದು ಹಾರೈಸಿದರು. ಛದ್ಮವೇಷ ಸ್ಪರ್ಧೆ ನಡೆಯಿತು. ವಾಹಿನಿಯ ಅಧ್ಯಕ್ಷ ಚಂದನ್ ಪ್ರಭು ಸ್ವಾಗತಿಸಿ ಪರಿಚಯಿಸಿದರು. ನಿತ್ಯಾನಂದ ನಾಯಕ ಯುವವಾಹಿನಿಯ, ಗೌರಿ ನಾಯಕ ಮಹಿಳಾ ವಾಹಿನಿಯ ವರದಿ ಓದಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ವಿಶ್ವನಾಥ ನಾಯಕ ಮತ್ತು ಮುರಳಿ ಶಾನಭಾಗ ಕಾರ್ಯಕ್ರಮ ನಿರ್ವಹಿಸಿದರು.
Leave a Comment