ಹೊನ್ನಾವರ ,ಜೀವನ ಒಂದು ರೈಲು ಪ್ರಯಾಣವಿದ್ದಂತೆ. ನಾವು ನಮ್ಮ ನಿಲ್ದಾಣ ಬಂದೊಡನೆ ಇಳಿದು ಹೋಗುತ್ತೇವೆ. ಈ ಪ್ರಯಾಣದಲ್ಲಿ ಒಳ್ಳೆಯವರನ್ನು, ಕೆಟ್ಟವರನ್ನು ಭೇಟಿ ಮಾಡುತ್ತೇವೆ. ನಮ್ಮ ಪ್ರವಾಸವನ್ನು ಸುಖಮಯವನ್ನಾಗಿಸುವುದು ನಮ್ಮಲ್ಲಿಯೇ ಇದೆ. ಸ್ವಯಂ ಸ್ಪೂರ್ತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ನಿವೃತ್ತ ಅಭಿಯಂತರ, ಶಿಕ್ಷಣ ಪ್ರೇಮಿಗಳಾದ ಪಿ. ಬಿ. ಶ್ಯಾನಭಾಗ ನುಡಿದರು.
ಹೊನ್ನಾವರದ ಪುಟ್ಟ ಹಳ್ಳಿ ಕಾಸರಕೋಡಿನಲ್ಲಿ ಜನಿಸಿದ ನಾನು ಸಾಧನೆ ಮಾಡಲು ಸಹಕಾರಿಯಾದದ್ದು ನನ್ನೊಳಗಿನ ಅಂತಃಸ್ಪೂರ್ತಿ. ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳನ್ನು ನೋಡಿ, ಅವರನ್ನು ಒಡನಾಡಿ, ಅವರ ಜೀವನ ಚರಿತ್ರೆಗಳನ್ನು ಓದಿ ಪ್ರೇರಣೆ ಪಡೆದಾಗ ಮಾತ್ರ ಅವರು ಯಶಸ್ವಿಗಳಾಗಲು ಸಾಧ್ಯ ಎಂದು ಅವರು ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ತಮ ಗುರಿ ಮತ್ತು ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಸಿದ್ಧ ಆಹಾರದಂತಹ ಶಿಕ್ಷಣ ನೀಡದೇ, ಆಹಾರ ಬೆಳೆಯುವ ಕೌಶಲ್ಯ ಕಲಿಸಿಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮಾತನಾಡಿ ಪಿ.ಬಿ.ಶ್ಯಾನಭಾಗರವರಂತಹ ಶ್ರೇಷ್ಠ ವ್ಯಕ್ತಿಗಳು ವಿರಳರಲ್ಲಿ ವಿರಳರು. ಇಳಿ ವಯಸ್ಸಿನಲ್ಲಿಯೂ ಅವರ ಉತ್ಸಾಹ ಅನುಕರಣೀಯವಾದದ್ದು. ಅವರ ಶಿಕ್ಷಣ ಪ್ರೇಮ ನಮಗೆಲ್ಲ ಮಾದರಿ. ನಮ್ಮ ಸಂಸ್ಥೆಗೆ ಅವರ ಆಗಮನ ಅತೀವ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಅಹಂ ಬಿಟ್ಟು ವಿನಯವನ್ನು ರೂಡಿಸಿಕೊಂಡು ನಿಸ್ವಾರ್ಥ ಸೇವಾಮನೋಭಾವವನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ ಎಂದು ನುಡಿದರು.
ಎಂ.ಪಿ.ಇ. ಸೊಸೈಟಿಯ ಖಜಾಂಚಿಯವರಾದ ಉಮೇಶ ನಾಯ್ಕರವರು ಉಪಸ್ಥಿತರಿದ್ದರು. ಪ್ರೊ. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
Leave a Comment