ಹೊನ್ನಾವರ: ಹುಟ್ಟು ಹಬ್ಬವೆಂದರೆ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಚಾಕಲೇಟ್ ಹಂಚುವುದು, ಉಡುಗೊರೆ ಎಲ್ಲಾ ಸಾಮಾನ್ಯ ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಊರಿನ ಬಸ್ ತಂಗುದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿ, ಪೊರಕೆ ನೀಡಿ ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ಯುವ ಒಕ್ಕೂಟದ ಅಧ್ಯಕ್ಷ ಮೂಡ್ಕಣಿಯ ವಿನಾಯಕ ಬಿ. ನಾಯ್ಕ ಅವರು ಇತ್ತೀಚೆಗೆ ಮೂಡ್ಕಣಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡರು.
ಹಲವಾರು ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿರುವ ಇವರು ಹೊನ್ನಾವರ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕು, ಜಿಲ್ಲಾ ಯುವ ಪ್ರಶಸ್ತಿ ಹಾಗೂ ಅನೇಕ ಸನ್ಮಾನಗಳನ್ನು ಪಡೆದಿರುವ ಇವರು ಈ ವರ್ಷದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ವಿನಾಯಕ ನಾಯ್ಕ “ನಾನು ಸಾಮಾಜಿಕ ಕಾರ್ಯಕರ್ತ. ನನ್ನ ಹುಟ್ಟು ಹಬ್ಬದಲ್ಲಿ ಏನಾದರೂ ವಿಶೇಷ ಇರಬೇಕು. ಜನರಿಗೆ ಅನುಕೂಲವಾಗಬೇಕು ಎಂಬುದು ನನ್ನಿಚ್ಛೆ. ಈ ಹಿನ್ನೆಲೆಯಲ್ಲಿ ನನ್ನೂರಿನ ಬಸ್ ತಂಗುದಾಣಕ್ಕೆ ಸಣ್ಣ ಕೊಡುಗೆ ನೀಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.
Leave a Comment