ಹೊನ್ನಾವರ:
ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲಕೋಡ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಲೋಕದ ಸಮಸ್ತ ರಸಿಕರ ಮನ ಸೂರೆಗೊಳ್ಳುವ ಹಾಗೆ ತಮ್ಮ ಸುಮಧುರವಾದ ಮದ್ದಲೆ-ಚಂಡೆ ವಾದನದ ನಾದ ವೈಖರಿಯಿಂದ ಯಕ್ಷಗಾನ ಕಲಾಲೋಕದ ಅಸಂಖ್ಯ ಕಲಾವಿದರ, ಕಲಾಭಿಮಾನಿಗಳ ಮನಸೂರೆಗೊಂಡವರು ಮಂಜುನಾಥ ಬಂಡಾರಿಯವರು. ಯಕ್ಷರಂಗಕ್ಕೆ ಕರ್ಕಿಯ ಭಂಡಾರಿ ಮನೆತನದವರ ಕೊಡುಗೆ ಅತ್ಯಮೂಲ್ಯವಾಗಿದೆ ಹಲವಾರು ವರ್ಷಗಳ ಹಿಂದೆ ಕಾಣಿಸಿಕೊಂq ಭಂಡಾರಿಯವರ ತೀವ್ರ ಕೈ ನೋವಿನಿಂದಾಗಿ ಅವರ ಕುಟುಂಬಕ್ಕೆ ಆಧಾರವಾಗಿದ್ದ ಮದ್ದಲೆ ನುಡಿಸುವಿಕೆ, ವಿಗ್ರಹಗಳ ತಾಯಾರಿಕೆಯೂ ಅಸಾಧ್ಯವಾಗಿದೆ. ಹೀಗಾಗಿ ಅವರ ಕುಟುಂಬ ನಿರ್ವಹಣೆಗೆ ಬೇಕಾಗುವ ಸಂಪಾದನೆಯೂ ಶೂನ್ಯವಾಗಿದೆ. ಸುಮಾರು ಏಳು ವರ್ಷಗಳಿಂದ ದುಡಿಯುವ ಕೈಗಳನ್ನು ಉಳಿಸಿಕೊಳ್ಳುವುದಕ್ಕೆ ಲಕ್ಷಾಂತರ ರೂ. ಗಳನ್ನು ವ್ಯಯಿಸಿದರೂ ಫಲಕಾರಿಯಾಗಲಿಲ್ಲ. ಸುಮಾರು 35 ವರ್ಷಗಳಕಾಲ ಕಲಾಸೇವೆಯನ್ನೇ ಉಸಿರಾಗಿಸಿಕೊಂಡು ಕಲೆಯಿಂದಲೇ ಬದುಕು ಕಟ್ಟಿಕೊಂಡಿರುವ ಮಂಜುನಾಥ ಭಂಡಾರಿ ಅವರ ಬಿಕ್ಕಟ್ಟಿನ ಬದುಕಿಗೆ ಹೊಸ ಚೌಕಟ್ಟನ್ನು ನೀಡುವ ಸಲುವಾಗಿ ಎಲ್ಲರೂ ಒಂದಾಗಿ ಉದಾರ ಮನದಿಂದ ಹಮ್ಮಿಣಿ ಅರ್ಪಿಸಲಿದ್ದೇವೆ. ಕತ್ತಲೆ ತುಂಬಿದ ಅವರ ಬಾಳಿನಲ್ಲಿ ಭರವಸೆಯ ಹೊಸ ಬೆಳಕು ಹಚ್ಚಬೇಕಾಗಿದೆ ಎಂದರು.
ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ `ಮಂಜುನಾಥ ಭಂಡಾರಿ ಅವರದು ಕಲೆಯನ್ನು ಆಧರಿಸಿಕೊಂಡು ಜೀವನ ನಡೆಸುತ್ತಿರುವ ಕುಟುಂಬ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎನ್ನುವಂತೆ ಕಳೆದ ಏಲು ವರ್ಷಗಳ ಹಿಂದೆ ಇವರ ಕೈ ಮಣಿಕಟ್ಟಿನ ನೋವು ಇವ ಬದುಕನ್ನು ಬರಡಾಗಿಸಿತು. ಈಗ ಇವರ ಕುಟುಂಬಕ್ಕೆ ಆಧಾರವಾಗಿದ್ದ ಮದ್ದಲೆಯ ನುಡಿಸುವಿಕೆ ಮತ್ತು ಮದ್ದದಲೆ ತಯಾರಿಕೆಯೂ ಇಲ್ಲ. ಭಂಡಾರಿಯವರ ಮದ್ದಲೆ ನುಡಿಸುವಿಕೆಯಿಂದ ಲಕ್ಷಾಂತರ ಯಕ್ಷಪ್ರೇಮಿಗಳ ಹೃದಯದ ಮಿಡಿತ ಹೆಚ್ಚಿಸಿರುವ ಭಂಡಾರಿಯವರ ಬದುಕು ಸಂಕಷ್ಟದಲ್ಲಿದೆ. ಇಳಿವಯಸ್ಸಿನ ತಂದೆಯ, ಪತ್ನಿಯ ಹಾಗೂ ಉಭಯ ಹೆಣ್ಣುಮಕ್ಕಳ ಭವಿಶ್ಯ ಇವರ ಹೆಗಲ ಮೇಲಿದೆ. ಹೀಗಾಗಿ ಅವರ ಜೀವನ ಒಂದಿಷ್ಟು ಸಂತಸಮಯವಾಗಿಸಲು ಜೂನ್ 11 ರಂದು ಖ್ಯಾತ ಕಲಾವಿದರಿಂದ `ಲವಕುಶ’ ಮತ್ತು `ಭದ್ರಸೇನ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಯಕ್ಷಗಾನ ಪ್ರದರ್ಶನದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರಿಯಾಗಬೇಕು. ಮಂಜುನಾಥ ಭಂಡಾರಿ ಅವರಿಗೆ ಧನಸಹಾಯ ಮಾಡಬಯಸುವ ಕಲಾಭಿಮಾನಿಗಳು ಅವರ `ಕೆಡಿಸಿಸಿ ಬ್ಯಾಂಕ್’ ಕರ್ಕಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ 622014530596 ಇದಕ್ಕೆ ಸಂದಾಯ ಮಾಡಬಹುದು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದ ಮಂಜುನಾಥ ಭಂಡಾರಿ, ಗಣೇಶ ಭಂಡಾರಿ ಇತರರಿದ್ದರು.
Leave a Comment