ಕಾರವಾರ:
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರ ಆಗಮಿಸಿ ನೂರಾರು ಸಿದ್ಧಿ ಸಮುದಾಯದ ಜನರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಅರಣ್ಯ ಹಕ್ಕು ಕಾಯಿದೆಯಡಿ ತಿರಸ್ಕøತಗೊಂಡ ಜಿಲ್ಲೆಯ ಬುಡಕಟ್ಟು ಸಿದ್ಧಿ ಸಮುದಾಯದ ಅರ್ಜಿಗಳನ್ನು ಪುನರ್ಪರಿಶೀಲಿಸುವದರ ಜೊತೆ ಉದ್ಯೋಗ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ಬುಡಕಟ್ಟುಗಳ ಹಾಗೂ ಪಾರಂಪರಿಕ ಅರಣ್ಯ ನಿವಾಸಿಗಳ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸಿದ್ಧಿ ಫಲಾನುಭವಿಗಳಿಗೆ ಹಕ್ಕನ್ನು ನೀಡಬೇಕು. ಈಗಾಗಲೇ 300 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು ಅವುಗಳನ್ನು ಪುನರ್ಪರಿಶೀಲಿಸಿ ಭೂಮಿಯನ್ನು ನೀಡ ಬೇಕು. ಸಿದ್ಧಿ ಸಮುದಾಯದವರ ಪಿತ್ರಾರ್ಜಿತ ಆಸ್ತಿಯನ್ನು ಕೆಲವರು ಮೋಸದಿಂದ ತಮ್ಮದಾಗಿಸಿಕೊಮಡಿದ್ದು ಅದನ್ನು ನ್ಯಾಯಯುತವಾಗಿ ಪರಿಶೀಲಿಸಿ ಮರಳಿ ಕೊಡಿಸಬೇಕು. ಸಿದ್ಧಿಗಳಿಗೆ ಬಹುಸಂಖ್ಯಾತರಿಂದ ಆಗುವ ಕಿರುಕುಳದಿಂದ ರಕ್ಷಣೆ ಕೊಡಿಸ ಬೇಕು. ಸಮಾಜ ಕಲ್ಯಾಣ ಸಚಿವರು 2016ರಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಘೋಷಣೆ ಮಾಡಿದ 52 ಕೋಟಿ ರೂ.ಗಳಲ್ಲಿ ಕೆಲವೇ ಕಾರ್ಯಗಳು ಮಾತ್ರ ಆಗಿದ್ದು ಸಂಪೂರ್ಣ ಸಿದ್ಧಿ ಸಮುದಾಯಕ್ಕೆ ಉಪಯೋಗಿಸಿಲ್ಲ. ಆದ್ದರಿಂದ ಮನೆ, ಕೊಳವೆ ಬಾವಿ, ಸಭಾಭವನದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಉಳಿದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ 7 ತಾಲೂಕುಗಳಲ್ಲಿ ಸಿದ್ಧಿ ಸಮುದಾಯದವರು ಶತಮಾನಗಳಿಂದ ನೆಲೆಸಿದ್ದಾರೆ. ಆದರೆ ಇಂದಿನವರೆಗೂ ತಮ್ಮದೇ ಆದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಬೇರೆಯವರ ದಾಸ ಸ್ಥಾನಕ್ಕೆ ಬಲಿಪಶುಗಳಾಗುತ್ತಿದ್ದಾರೆ. 2003 ರಲ್ಲಿ ಕೇಂದ್ರಸರಕಾರವು ಸಿದ್ಧಿಗಳನ್ನು ಗಿರಿಜನ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಯಿತು. ಅಂದಿನಿಂದ ತಮ್ಮದೇ ಆದ ಸಂಘಟನೆಗನ್ನು ರಚಿಸಿಕೊಂಡು ಮ್ಮ ಕಷ್ಟ ಕಾರ್ಪಣ್ಯಗಳ ಬಗ್ಗೆ ಸರಕಾರದ ಗಮನ ಸೆಳೆದು ಮೂಲಭೂತ ಸೌಕರ್ಯಗಳನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರದ ಮೂಲಕ ನೀಡಲಾಗುವ ಹೆಚ್ಚಿನ ಸೌಲಭ್ಯಗಳನ್ನು ಅಧಿಕಾರಿಗಳ ಮೂಲಕ ನೇರವಾಗಿ ನೀಡುವಂತಾದರೆ ಬದುಕನ್ನು ರೂಪಿಸಿ ಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಸಿದ್ಧಿ ಸಮುದಾಯದ ಯುವಕ ಯುವತಿಯರಿಗೆ ವಿದ್ಯಾರ್ಹತೆಗೆ ತಕ್ಕಂತೆ ಗಿರಿಜನ ಉಪ ಯೋಜನೆ ಅಡಿಯಲ್ಲಿ ಸರಕಾರದ ನೇಮಕಾತಿಗಳಲ್ಲಿ ನೇರವಾಗಿ ಆಯ್ಕೆ ಮಾಡಿಕೊಳ್ಳಬೇಕು. ಸರಕಾರದ ಯೋಜನೆಗಳಿಮದಾಗಿ ಅರಣ್ಯ ಸಂಪತ್ತು ನಾಶವಾಗುತ್ತಿದ್ದು ಸಿದ್ಧಿಗಳ ಬದುಕೂ ಕೂಡ ಅತಂತ್ರ ಸ್ಥಿತಿಗೆ ತಲುಪಿದೆ. ಆದ್ದರಿಂದ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆ ಎಂದು ಘೋಷಿಸಬೇಕು. ಜಿಲ್ಲೆಯ ಬುಡಕಟ್ಟು ಸಮುದಾಯಗಳು ಹಾಗೂ ಇತರ ಪಾರಂಪರಿಕ ಅರಣ್ಯ ನಿವಾಸಿಗಳ ಬದುಕನ್ನು ರೂಪಿಸಲು ಐ.ಟಿ.ಡಿ.ಪಿ. ಅಧಿಕಾರಿ ನೇಮಿಸಿ ಸಮುದಾಯದ ಸಂಪೂರ್ಣ ನಿಜ ಪರಿಸ್ಥಿತಿ ಅರಿತು ಸವಲತ್ತುಗಳು ನೇರವಾಗಿ ಸಿಗುವಂತೆ ಮಾಡಬೇಕು. ಸರಕಾರದ ಹಲವಾರು ಕಮಿಟಿಗಳಿಗೆ ಸಿದ್ಧಿಗಳನ್ನು ಕೂಡ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಕೊಳ್ಳಬೇಕು ಎಂದು ಮನವಿಯ ಮುಖಾಂತರ ಆಗ್ರಹಿಸಿದರು.ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯ ಅಧ್ಯಕ್ಷ ದಿಯೋಗ ಬಿ.ಸಿದ್ಧಿ, ನಜೀರ ಸಿದ್ಧಿ, ಸಂತೋಷ ಸಿದ್ಧಿ, ಇಮಾಮ್ ಸಿದ್ಧಿ, ಸಿಮಾಂವ ಸಿದ್ಧಿ,ಇತರರಿದ್ದರು.
Leave a Comment