ಹಳಿಯಾಳ : ವಿಧವೆ ಮಹಿಳೆಗೆ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೋಲಿಸರಿಂದ ಹಳಿಯಾಳದ ಒರ್ವ ಯುವಕನನ್ನು ಬಂಧಿಸಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಳಿಯಾಳದ ಯಲ್ಲಾಪೂರ ನಾಕಾ ಬಡಾವಣೆಯ ಅರ್ಜುನ ಚಲವಾದಿ(29) ರಾಮದುರ್ಗ ಪೋಲಿಸರಿಂದ ಪ್ರಕರಣ 420 ಮೊಸ, ವಂಚನೆ ಪ್ರಕರಣದಡಿ ಬಂಧಿತ ಯುವಕನಾಗಿದ್ದು ಇದಿಗ ಕಂಬಿ ಎನಿಸುತ್ತಿದ್ದಾನೆ.
ರಾಮದುರ್ಗದ ವಿಧವೆ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದ ಹಳಿಯಾಳದ ಅರ್ಜುನ ಆಕೆಯನ್ನು ತನ್ನ ಬಣ್ಣದ ಮಾತುಗಳಲ್ಲಿ ಬುಟ್ಟಿಗೆ ಹಾಕಿಕೊಂಡು ಆಕೆಯಿಂದ ಸುಮಾರು 8.50 ಲಕ್ಷ ರೂ. ನಗದು ಹಾಗೂ 5 ತೊಲೆ ಬಂಗಾರವನ್ನು ಎಗರಿಸಿಕೊಂಡು ಯಾಮಾರಿಸಿದ್ದ ಬಳಿಕ ಅರ್ಜುನ ಆಕೆಯ ಸಂಪರ್ಕವನ್ನು ನಿಲ್ಲಿಸಿದಾಗ ಸಂಶಯಗೊಂಡ ಆಕೆ ತಾನು ಮೊಸ ಹೊಗಿರುವುದನ್ನು ಅರಿತು ರಾಮದುರ್ಗ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು ಕಳೆದ 8 ದಿನಗಳ ಹಿಂದೆ ಆರೋಪಿಯ ಮೊಬೈಲ್ ಜಾಡು ಹಿಡಿದು ಹಳಿಯಾಳಕ್ಕೆ ಆಗಮಿಸಿದ ಪೋಲಿಸರು ಆತನನ್ನು ಬಂಧಿಸಿ ತನಿಖೆ ಆರಂಭಿಸಿದ್ದರು.
ಗುರುವಾರ ದಿ.10 ರಂದು ಆರೋಪಿಯೊಂದಿಗೆ ಹಳಿಯಾಳಕ್ಕೆ ಆಗಮಿಸಿದ ರಾಮದುರ್ಗ ಪೋಲಿಸರು ಆರೋಪಿ ತಾನು ಮಹಿಳೆಗೆ ವಂಚನೆ ಎಸಗಿ ತಂದ 5 ತೊಲೆ ಬಂಗಾರವನ್ನು ಒರ್ವ ಮಹಿಳೆಯ ಮೂಲಕ ಹಳಿಯಾಳದ ಪೇಟೆ ಬಸವೇಶ್ವರ ದೇವಸ್ಥಾನದ ಬಳಿಯ ಪ್ರಕಾಶ ಎನ್ನುವ ಚಿನ್ನದ ಅಂಗಡಿಯವನಿಗೆ ಮಾರಾಟ ಮಾಡಿದ್ದು ಮೊಸವೆಸಗಿ ತಂದ ಚಿನ್ನದ ವಿಚಾರವನ್ನು ಪರಿಶೀಲಿಸದೆ ಚಿನ್ನವನ್ನು ಖರೀದಿ ಮಾಡಿದ ಜ್ಯೂವೆಲ್ಲರಿ ಮಾಲಿಕ ಪ್ರಕಾಶನನ್ನು ಪೋಲಿಸರು ತಮ್ಮ ವಶಕ್ಕೆ ಪಡೆದ ವಿದ್ಯಮಾನ ನಡೆದಿದ್ದು ತನಿಖೆಯ ವೇಳೆ ಮಹಿಳೆ ಪ್ರಕಾಶನ ಅಂಗಡಿಗೆ ತೆರಳಿ ಆತನಿಗೆ ಚಿನ್ನ ಮಾರಾಟ ಮಾಡಿರುವುದಾಗಿ ಹೇಳಿದ್ದರಿಂದ ಆಪಾದಿತನನ್ನು ಹೆಚ್ಚಿನ ವಿಚಾರಣೆಗೆ ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ತಿಂಗಳ ಅವಧಿಯಲ್ಲಿ ಹಳಿಯಾಳದಲ್ಲಿ ನಡೆದ ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹಳಿಯಾಳದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಪಟ್ಟಣದ ನೂರಾರು ಜನತೆ ಪೋಲಿಸ್ ಠಾಣೆಗೆ ತಂಡೊಪತಂಡವಾಗಿ ಬಂದು ವಿಷಯ ತಿಳಿಯಲು ಪ್ರಯತ್ನಿಸುತ್ತಿದ್ದ ದೃಶ್ಯ ಕಂಡು ಬಂದು ಪೋಲಿಸರಿಗೆ ಗಂಟೆಗಳ ಕಾಲ ತಲೆನೋವಾಗಿ ಪರಿಣಮಿಸಿತ್ತು.
Leave a Comment