ಕಾರವಾರ:
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ.
ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ ರಭಸಗೊಂಡಿದೆ. ಜಲಪಾತದ ತಲೆಭಾಗದಲ್ಲಿ ಹಿಂದಿನಿಂದಲೂ ನೀರು ಶೇಖರಗೊಂಡಿದ್ದು, ರಭಸ ಮಳೆಗೆ ಜಲಪಾತದ ಮೇಲ್ಬಾಗದಲ್ಲಿನ ಕಟ್ಟೆ ಒಡೆದು ಶೇಖರಿಸಲ್ಪಟ್ಟದ್ದ ನೀರು ತಳಭಾಗಕ್ಕೆ ಹರಿದಿದೆ. ಪರಿಣಾಮ ನೀರಿನಲ್ಲಿ ಆಡುತ್ತಿದ್ದ ಆರು ಮಂದಿ ಸುಳಿಗೆ ಸಿಲುಕಿ ರಭಸವಾಗಿ ಕೊಚ್ಚಿ ಹೋಗಿದ್ದಾರೆ. ಹೀಗೆ ಕೊಚ್ಚಿ ಹೋದವರಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದು, ಈ ಪೈಕಿ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ನೀರಿನ ಸೆಳೆತಕ್ಕೆ ಸಿಲುಕಿ ಸಾವನಪ್ಪಿ ಮರಗಳ ನಡುವೆ ಸಿಕ್ಕಿಬಿದ್ದಿದ್ದ ಪ್ರಾನ್ಸಿಲಾ ಪೇರಿಸ್ (21) ಹಾಗೂ ಪೋಯಿನಾ ಪಾಚಾಗೋ (28) ಎಂಬಾತರ ಮೃದ ದೇಹವನ್ನು ಸ್ಥಳೀಯರು ಹೊತ್ತು ಊರಿಗೆ ತಂದರು. ಉಳಿದಂತೆ ಮೆಕ್ಸಿಕಾ (38), ರೇಣುಕಾ (23), ಸಿದ್ದು ಚಾರ್ಯ (21), ಸಮೀರ್ ಗಾವಡೆ (23) ಎಂಬಾತರ ಸುಳಿವು ಸಿಕ್ಕಿಲ್ಲ. ನಾಗರಮುಡಿ ಜಲಪಾತ ಹಾಗೂ ಸುತ್ತಲಿನ ಪ್ರದೇಶದಲ್ಲಿ ನೂರಾರು ಮಂದಿ ನೀರಿನಲ್ಲಿ ಕಾಣೆಯಾದವರ ಹುಡುಕಾಟ ನಡೆಸುತ್ತಿದ್ದಾರೆ.
Leave a Comment