ಹೊನ್ನಾವರ:
ತಾಲೂಕಿನ ಹೊಸಾಡದ ರಂಗಿನಮೋಟಾದಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರ ಉಪಸ್ಥಿತಿಯಲ್ಲಿ ವಾಲಿಬಾಲ್ ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಲ್ಲಿಗೆ ಸಮೀಪದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ಸಿಡಿಮದ್ದು ಸ್ಪೋಟಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ. ಪ್ರಭಾತನಗರದ ರೈಮಂಡ್ ಕೈತಾನ ಮಿರಾಂಡ (24) ಎಂಬುವವನು ಸಿಡಿಮದ್ದು ಸಿಡಿಸಿ ಗಾಯಗೊಂಡ ವ್ಯಕ್ತಿ. ಹೊಸಾಡದಲ್ಲಿ ಶರಾವತಿ ಫ್ರೆಂಡ್ಸ್ ಅವರು ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯ ಸಭಾಕಾರ್ಯಕ್ರಮದಲ್ಲಿ ಶಾಸಕ ಮಂಕಾಳ ವೈದ್ಯ ಹಾಗೂ ಸ್ಥಳಿಯ ಮುಖಂಡರು ವೇದಿಕೆಗೆ ತೆರಳುತ್ತಿರುವಾಗ ಪಟಾಕಿ ಸಿಡಿಸಲಾಗುತ್ತಿತ್ತು ಈ ಸಂದರ್ಭದಲ್ಲಿ ವೇದಿಕೆಯಿಂದ ಸುಮಾರು 30 ಮೀಟರ್ ಅಂತರದಲ್ಲಿರುವ ಪ್ರಾನ್ಸಿಸ್ ಮುನ್ವೆಲ್ ರೋಡ್ರಿಗಿಸ್ ಇವರ ಮನೆಯ ತೋಟದಲ್ಲಿದ್ದ ರೈಮಂಡ್ ಮಿರಾಂಡನು ಯಾವುದೋ ದುರುದ್ದೇಶದಿಂದ ಅಥವಾ ಪಟಾಕಿ ಅಥವಾ ಇನ್ಯಾವುದೋ ಸ್ಪೋಟಕ ವಸ್ತುವನ್ನು ಅನಧಿಕೃತವಾಗಿ ತೆಗೆದುಕೊಂಡು ಬಂದು ತನ್ನ ಬಲಗೈಯಲ್ಲಿ ಸ್ಪೋಟಿಸಿಕೊಂಡ ಪರಿಣಾಮ ಆತನ ಕೈಗೆ ಗಂಭೀರ ಗಾಯವಾಗಿದೆ. ಭಯ ಮತ್ತು ಆತಂಕಗೊಂಡ ಜನರು ಸಭಾ ಕಾರ್ಯಕ್ರಮ ಮೊಟಕುಗೊಳಿಸಿ ತೆರಳಿದರು. ರೈಮಂಡ್ ಮಿರಾಂಡನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಹೊಸಾಡ ಪಾರದ ಗಣಪತಿ ಮಾದೇವ ಅಂಬಿಗ ಹೊನ್ನಾವರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
“ಆರೋಪಿ ರೈಮಂಡ್ ಮಿರಾಂಡ ಇದೀಗ ಪೊಲೀಸ್ ವಶದಲ್ಲಿದ್ದು, ಆತನಿಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ವಿಧಿವಿಜ್ಞಾನ ಇಲಾಖೆಯ ತಜ್ಞರು ಬಂದು ಸ್ಥಳ ಪರಿಶೀಲಿಸಿ ವರದಿ ನೀಡುತ್ತಾರೆ. ಗಾಯಗೊಂಡ ಆರೋಪಿಯನ್ನು ವಿಚಾರಿಸುತ್ತೇವೆ.”
– ವಿನಾಯಕ ರಾವ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
`ಈ ಘಟನೆಯಿಂದ ಇದರಿಂದ ನನಗೆ ತುಂಬಾ ನೋವುಂಟಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ. ನನ್ನ ರಾಜಕೀಯ ಉನ್ನತಿಯನ್ನು ಸಹಿಸದ ಕೆಲವರು ಇದನ್ನು ಮಾಡಿದ್ದಾರೆ”
– ಮಂಕಾಳ ವೈದ್ಯ, ಶಾಸಕ
Leave a Comment