ದಾಂಡೇಲಿ :
ನಗರದ ದಾಂಡೇಲಿ ಅರಣ್ಯ ವಲಯದ ಮೌಳಂಗಿಯ ಅರಣ್ಯ ರಕ್ಷಕ ಶಿವಶರಣ ಕೋಳಿ ಎಂಬಾತ ಲಂಚ ಪಡೆಯುತ್ತಿರುವಾಗ ಭೃಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಘಟನೆಯ ವಿವರ :
ಮೌಳಂಗಿ ಪ್ರದೇಶದ ನಿವಾಸಿ ಸುನೀಲ ಕಾಂಬಳೆ ಎಂಬವರು ಇಟ್ಟಂಗಿ ಸುಡಲು ಕಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೌಳಂಗಿ ಪ್ರದೇಶದ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ಮತ್ತು ಅರಣ್ಯ ರಕ್ಷಕ ಶಿವಶರಣ ಕೋಳಿ ದಾಳಿ ನಡೆಸಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೆದರಿಸಿ ರೂ: ಹತ್ತು ಸಾವಿರ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು. ಬೇಡಿಕೆಗೆ ಒಪ್ಪಿದ್ದ ಕಾರಣ ಸುನೀಲ ಕಾಂಬಳೆಯವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಆನಂತರದ ದಿನಗಳಲ್ಲಿ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ಮತ್ತು ಅರಣ್ಯ ರಕ್ಷಕ ಶಿವಶರಣ ಕೋಳಿ ಪ್ರತಿದಿನ ಲಂಚದ ಹಣಕ್ಕಾಗಿ ಸುನೀಲ ಕಾಂಬಳೆಯವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಹಣ ನೀಡದಿದ್ದಲ್ಲಿ ನಿನ್ನನ್ನು ಒದ್ದು ಜೈಲಿಗೆ ಅಟ್ಟುವುದಾಗಿ ಪೀಡಿಸುತ್ತಿದ್ದರೆಂದು ತಿಳಿದುಬಂದಿದೆ.
ಈ ನಡುವೆ ಸುನೀಲ ಕಾಂಬಳೆಯವರು ಈ ಬಗ್ಗೆ ಅಂಬೇಡ್ಕರ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಕರ್ನಿಂಗ್ ಅವರಲ್ಲಿ ನನಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತೀವ್ರ ತೊಂದರೆಯಾಗುತ್ತಿರುವುದನ್ನು ವಿವರಿಸಿದ್ದರು. ವಿಷಯವನ್ನು ತಿಳಿದು ಎಚ್ಚೆತ್ತ ವಿನಾಯಕ ಕರ್ನಿಂಗ್ ಅವರು ಸುನೀಲ ಕಾಂಬಳೆಯವರ ಮೂಲಕ ಎಸಿಬಿಗೆ ದೂರು ನೀಡಿದ್ದರು.
ಎಸಿಬಿಗೆ ದೂರು ನೀಡಿದ ಬಳಿಕ ಹಣಕ್ಕಾಗಿ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ಮತ್ತು ಅರಣ್ಯ ರಕ್ಷಕ ಶಿವಶರಣ ಕೋಳಿ ಮತ್ತೇ ಪೀಡಿಸಲಾರಂಭಿಸಿದಾಗ ಬುಧವಾರ ನಗರದ ಲಿಂಕ್ ರಸ್ತೆಯಲ್ಲಿರುವ ಶೀತಲ್ ಕೋಲ್ಡಿಂಕ್ರ್ಸ್ಗೆ ಸಂಜೆ ಬನ್ನಿ, ಹಣ ನೀಡುವುದಾಗಿ ತಿಳಿಸಿದ್ದರು. ಅದರಂತೆ ಅರಣ್ಯ ರಕ್ಷಕ ಶಿವಶರಣ ಕೋಳಿ ಶೀತಲ್ ಕೋಲ್ಡಿಂಕ್ಸ್ಗೆ ಬಂದು ಸುನೀಲ ಕಾಂಬಳೆಯವರಿಂದ ರೂ: 5 ಸಾವಿರ ಹಣ ಸ್ವೀಕರಿಸುತ್ತಿರುವಾಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ತಲೆಮರೆಸಿಕೊಂಡಿದ್ದರೂ ಸಂಜೆಯೊಳಗೆ ಎಸಿಬಿಯವರು ಈತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಭೃಷ್ಟಚಾರ ನಿಗ್ರಹ ದಳದ ಡಿವೈಎಸ್ಪಿ ಗಿರೀಶ ಅವರ ನೇತೃತ್ವದಲ್ಲಿ ಸಿಪಿಐ ರಮೇಶ, ಸಿಬ್ಬಂದಿಗಳಾದ ರಾಜೇಶ ಪ್ರಭು, ಕೃಷ್ಣ, ಗಜೇಂದ್ರ, ಪ್ರಸಾದ ನಾಯ್ಕ, ಶಿವಕುಮಾರ್ ಮತ್ತು ಮೆಹಬೂಬು ಆಲಿ ದಾಳಿ ನಡೆಸಿದ್ದರು.
ಬಿಸಿ ಮುಟ್ಟಿಸಿದ ಎಸಿಬಿ :
ನಗರದಲ್ಲಿ ಎಸಿಬಿ ದಾಳಿ ಸುದ್ದಿ ಹರಡುತ್ತಿದ್ದಂತೆಯೆ ಅರಣ್ಯ ಇಲಾಖೆ, ನಗರ ಸಭೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಡುಕವುಂಟಾಗಿದ್ದು, ಇದೊಂದು ಉಳಿದ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯ ಘಂಟೆಯಾಗಿ ಗಮನ ಸೆಳೆಯಿತು.
Leave a Comment