ಹೊನ್ನಾವರ: `
ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ, ಉಚಿತ ಸಲಹೆ ಮತ್ತು ಶೇ. 25ರ ರಿಯಾಯತಿಯಲ್ಲಿ ಎಲ್ಲಾ ಬಗೆಯ ಆಧುನಿಕ ದಂತ ಚಿಕಿತ್ಸೆ ಪಡೆಯಲು ಜನಸಾಮಾನ್ಯರಿಗೆ ಉಚಿತ ದಂತ ಆರೋಗ್ಯ ಕಾರ್ಡ ನೀಡಲಾಗುವುದು’ ಎಂದು ಮಾರ್ಕೇಟಿಂಗ್ ವಿಭಾಗದ ಪ್ರತಿನಿಧಿ ಅನಿಲ್ ಜೇಕಬ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿಕಿತ್ಸೆ ಪಡೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಮಣಿಪಾಲದ ಪ್ರಥಮ ದರ್ಜೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನಸಾಮಾನ್ಯರಿಗೆ ಅನುಕೂಲವಾಗಲು ಈ ಯೋಜನೆ ಪ್ರಕಟಿಸಲಾಗಿದೆ. ಒಬ್ಬ ವ್ಯಕ್ತಿಗೆ 250 ರೂ., ಗಂಡ, ಹೆಂಡತಿ, ಇಬ್ಬರು ಅವಿವಾಹಿತ ಮಕ್ಕಳು ಸೇರಿದರೆ 520 ರೂ. ತಂದೆ, ತಾಯಿಗಳಿಗೆ ತಲಾ 100 ರೂ. ಗಳಂತೆ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ. ಮೇ. 28 ರೊಳಗೆ ಸದಸ್ಯರಾದವರಿಗೆ ಜೂ. 1 ರಿಂದ ಯೋಜನೆಯ ಲಾಭ ದೊರೆಯಲಿದೆ. ಮೇ. 29 ರಿಂದ ಜು. 27ರ ವರೆಗೆ ಸದಸ್ಯರಾದವರಿಗೆ ಅಗಸ್ಟ್ 1 ರಿಂದ ಯೋಜನೆಯ ಲಾಭ ದೊರೆಯಲಿದೆ. ಒಮ್ಮೆ ಕೇವಲ ಶೇ.50 ಸಂದರ್ಶನ ಶುಲ್ಕ ಪಾವತಿಸಿ, ನುರಿತ ವೈದ್ಯರನ್ನು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಭೇಟಿಯಾಗಬಹುದು. ಇಂತಹ ಹಲವು ಸೌಲಭ್ಯಗಳಿದ್ದು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಳೆದ ವರ್ಷ 1.5 ಲಕ್ಷ ಸದಸ್ಯರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ಜಿಲ್ಲೆಯಿಂದ 40 ಸಾವಿರ ಸದಸ್ಯರು ನೋಂದಾವಣೆ ಮಾಡಿಕೊಂಡು ಯೋಜನೆಯ ಲಾಭ ಪಡೆದಿದ್ದಾರೆ ಎಂದರು.
ಮಣಿಪಾಲ ಕೆ.ಎಂ.ಸಿ.ಯ 7 ಸಹಆಸ್ಪತ್ರೆಗಳು: ರಿಯಾಯತಿ ದರದಲ್ಲಿ ಪ್ರಸಿದ್ಧ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ದಂತ ವೈದ್ಯಕೀಯ ಆಸ್ಪತ್ರೆ, ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ, ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಮಂಗಳೂರು ಕೆ.ಎಂ.ಸಿ. ದಂತ ವೈದ್ಯಕೀಯ ಆಸ್ಪತ್ರೆಗಳಲ್ಲಿ ಶೇ.10 ರಿಂದ 50ರ ವರೆಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಅನುಕೂಲವನ್ನು ಪಡೆಯಲು ಜನಸಾಮಾನ್ಯರು ಮಣಿಪಾಲ ಆರೋಗ್ಯ ಕಾರ್ಡ ಕಡ್ಡಾಯವಾಗಿ ಹೊಂದಿರಬೇಕು. ಕಸ್ತೂರ್ಬಾ ಆಸ್ಪತ್ರೆಯ ಮಾಹಿತಿ ಕೇಂದ್ರ ಬಸ್ಸ್ಟ್ಯಾಂಡ್ ಹತ್ತಿರದಲ್ಲಿ ಇದ್ದು ಹೆಚ್ಚಿನ ಮಾಹಿತಿಯನ್ನು ಮತ್ತು ಮಣಿಪಾಲಕ್ಕೆ ಬರುವವರಿಗೆ ಪೂರ್ವ ನಿಗದಿ ವೈದ್ಯರ ಸಮಯ ಪಡೆಯಲು ಮಾಹಿತಿ ಕೇಂದ್ರದ ಪ್ರಯೋಜನ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾರ್ಕೇಟಿಂಗ್ ವಿಭಾಗದ ರವಿಕಿರಣ್ ಪೈ, ಹಿರಿಯ ಪತ್ರಕರ್ತ ಜಿ.ಯು.ಭಟ್ ಇತರರು ಇದ್ದರು.
Leave a Comment