ಹೊನ್ನಾವರ : ಸರಕಾರಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸಾ ತಜ್ಞರನ್ನು ನೇಮಿಸುವಂತೆ ಪಟ್ಟಣದ ರಿಕ್ಷಾಚಾಲಕರ ಸಂಘ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೊನ್ನಾವರ ತಾಲೂಕಾ ಆಸ್ಪತ್ರೆ ಉತ್ತಮ ವೈದ್ಯರ ತಂಡದೊಂದಿಗೆ ಸುಸಜ್ಜಿತ ಆಸ್ಪತ್ರೆಯಾಗಿದೆ. ಆದರೆ ಕೆಲವೊಂದು ಗಂಭೀರ ನ್ಯೂನ್ಯತೆಗಳು ಎದ್ದು ಕಾಣುತ್ತಿದೆ. ಈ ಬಗ್ಗೆ ಕಳೆದ 2-3 ವರ್ಷಗಳಿಂದ ಮನವಿ ನೀಡಿದರೂ ಯಾವುದೇ ಸ್ಪಂಧನೆ ದೊರೆತಿಲ್ಲ.
ತಾಲೂಕಿನ ಜನಸಂಖ್ಯೆ ಹೆಚ್ಚಾದಂತೆ ರೋಗಿಗಳ ಸಂಖ್ಯೆಯು ಹೆಚ್ಚಳವಾಗಿದೆ. ಸರಕಾರಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವೈದ್ಯರ ಕೊರತೆ ಇದೆ.
ಆಸ್ಪತ್ರೆಯಲ್ಲಿ ವೈಜ್ಞಾನಿಕ ತಪಾಸಣಾ ಸ್ಕ್ಯಾನಿಂಗ್, ಇನ್ನಿತರೆ ಯಂತ್ರೋಪಕರಣ ಇಲ್ಲದೇ ಇಲ್ಲಿ ದಾಖಲಾದ ರೋಗಿಗಳು ಅನಿವಾರ್ಯವಾಗಿ ಸಾಲ ಮಾಡಿ ಖಾಸಗಿ ಆಸ್ಪತ್ರೆಗೆ ತೆರಳಿ ಸ್ವಂತ ಹಣ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತಾಗಿದೆ. ಇದರಿಂದ ರೋಗಿಗಳಿಗೆ ಹಾಗೂ ರೋಗಿಯ ಕುಟುಂಬಗಳಿಗೆ ಆರ್ಥಿಕ ಹೊರೆ ಹೆಚ್ಚಿದೆ.
ಬಡಜನರ ಆರೋಗ್ಯ ದೃಷ್ಠಿಯಿಂದ 15 ದಿನದೊಳಗಾಗಿ ಶಸ್ತ್ರಚಿಕಿತ್ಸಾ ವೈದ್ಯರನ್ನು ನೇಮಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳ ಕಛೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಇತರ ಬೇಡಿಕೆಗಳು : ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕಾದಲ್ಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ಉಚಿತವಾಗಿ ಪೂರೈಸಬೇಕು. ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆ ನೀಡಲು ಸಕಾಲದಲ್ಲಿ ಯಾವುದೇ ವೈದ್ಯರು ಹಾಜರಿರುವುದಿಲ್ಲ. 24 ಗಂಟೆಯೂ ಖಾಯಂ ವೈದ್ಯರನ್ನು ನೇಮಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ, ಕ್ರಾಂತಿರಂಗದ ಉಪಾಧ್ಯಕ್ಷ ಜಿ.ಎನ್.ಗೌಡ, ಅನಿತಾ ಪಾಲೇಕರ್, ಡಾ.ಎಸ್.ಡಿ.ಹೆಗಡೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಕಿಣಿ ಮನವಿ ಸ್ವೀಕರಿಸಿದರು.
Leave a Comment