ಕಾರವಾರ:
ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್ಗಳು ದಡದಲ್ಲಿ ಲಂಗರು ಹಾಕಿವೆ.
ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ ಇರಿಸುವಲ್ಲಿ ಮಗ್ನರಾಗಿದ್ದಾರೆ. ಬಲೆ ಹಾಗೂ ಇನ್ನಿತರ ಸಾಮಾನುಗಳನ್ನು ಜೋಪಾನ ಮಾಡುತ್ತಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಅವೈಜ್ಞಾನಿಕ, ಲೈಟ್ ಫಿಶಿಂಗ್ ಹಾಗೂ 350 ಎಚ್ಪಿಗಿಂತಲೂ ಹೆಚ್ಚಿನ ಸಾಮಥ್ರ್ಯದ ಮೋಟರ್ ಇರುವ ದೋಣಿಗಳನ್ನು ಬಳಸಿ ಮೀನುಗಾರಿಕೆ ನಡೆಸುತ್ತಿರುವ ಪರಿಣಾಮವಾಗಿ ಮತ್ಸ್ಯಕ್ಷಾಮ ಹೆಚ್ಚಿದೆ. ನಿರಂತರವಾಗಿ ನಡೆಯುತ್ತಿರುವ ಆಳಸಮುದ್ರ ಮೀನುಗಾರಿಕೆಯಿಂದ ಮತ್ಸ್ಯ ಸಂತತಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಮೀನಿನ ವೈವಾಟು ಕೂಡ ಕಡಿಮೆಯಾಗುತ್ತಿದೆ. ಅಲ್ಲದೆ ಜೂನ್ ತಿಂಗಳಿನಲ್ಲಿ ಸಾಮಾನ್ಯವಾಗಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ಜೂನ್ ತಿಂಗಳಿಂದ 45 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗುತಿತ್ತು. ಕಳೆದ ಎರಡು ವರ್ಷದಿಂದ ನಿಷೇಧದ ಅವಧಿ ಎರಡು ತಿಂಗಳಿಗೆ ವಿಸ್ತರಿಸಲಾಗಿದೆ.
ಮೀನುಗಾರಿಕೆ ಹೇರಿರುವ ನಿಷೇಧವನ್ನು ಉಲ್ಲಂಘಿಸಿ 10 ಅಶ್ವಶಕ್ತಿಗಿಂತ ಹೆಚ್ಚು ಸಾಮಥ್ರ್ಯದ ಯಂತ್ರ ಬಳಸಿ ಮೀನುಗಾರಿಕೆ ನಡೆಸಿದಲ್ಲಿ ಮೀನುಗಾರರ ವಿರುದ್ಧ ಕರ್ನಾಟಕ ಕಡಲ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 1986 ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹ ದೋಣಿಗಳು ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನವನ್ನು ಕಳೆದುಕೊಳ್ಳಲಿವೆ. ಜತೆಗೆ ಮೀನುಗಾರರು ಕೇಂದ್ರ ಅಬಕಾರಿ ತೆರಿಗೆ ಮರುಪಾವತಿ ಪಡೆಯಲು ಅನರ್ಹರಾಗುತ್ತಾರೆ. ನಿಷೇಧದ ಸಮಯದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸದಂತೆ ನೋಡಿಕೊಳ್ಳಲು ಕರಾವಳಿ ಕಾವಲು ಪಡೆಗೆ ಕೇಂದ್ರ ಸೂಚನೆ ನೀಡಿದೆ.
ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿವರೆಗಿನ ಸಾಮಥ್ರ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ನೀಡಲಾಗಿದೆ. ಆದರೆ ಯಾರು ಕೂಡ ಅನಧಿಕೃತವಾಗಿ ಮೀನು ಹಿಡಿಯಲು ಅವಕಾಶವಿಲ್ಲ.
Leave a Comment