ಕಾರವಾರ:
ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸ್ಸಿನಂತೆ ಮಾಸಿಕ ಪಿಂಚಣಿ ಮತ್ತು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾ.ಕ.ರ.ಸಾ.ಸಂ. ನಿವೃತ್ತ ನೌಕರರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಸಂಸತ್ಗೆ ನೀಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿಲ್ಲ. 21 ಸಾವಿರ ಕೋಟಿ ರು.ನಷ್ಟು ಮೊತ್ತದಲ್ಲಿ ದೇಶದ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಮತ್ತು ತುಟ್ಟಿಭತ್ಯೆ ಹೆಚ್ಚಳ ಮಾಡಬಹುದಾಗಿದೆ. ಆದರೂ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿದಂತೆ ಕಾಣುತ್ತಿಲ್ಲ. ಕೂಡಲೇ ಸರಕಾರ ನಿವೃತ್ತ ನೌಕರರ ಪಿಂಚಣಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ 2018ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ನಿವೃತ್ತ ನೌಕರರ ಸಂಘದವರು ಮನವಿಯಲ್ಲಿ ಎಚ್ಚರಿಸಿದರು.
ಕಾರ್ಮಿಕ ಪಿಂಚಣಿ ಯೋಜನೆ-1995ರ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ನಾಲ್ಕೈದುವರ್ಷದ ಹಿಂದೆ ಸರಕಾರ 3000 ಕನಿಷ್ಟ ಪಿಂಚಣಿ ಹಾಗೂ 500 ರು ತುಟ್ಟಿ ಭತ್ಯೆ ನೀಡುವುದಾಗಿ ಘೊಷಿಸಿತ್ತಾದರೂ ಈವರೆಗೂ ನೀಡಿಲ್ಲ. ಇದರಿಂದ ದೇಶದಾದ್ಯಂತ ಸುಮಾರು 52 ಲಕ್ಷ ಪಿಂಚಣಿದಾರರು ಸಾಕಷ್ಟು ವರ್ಷಗಳಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ಎ.ಎನ್.ದೇಶಪಾಂಡೆ, ಎಸ್.ಎ.ಹಿರೇಮಠ, ಬಿ.ಎಂ.ಕೊಟಾಳೆ, ಪಿ.ಆರ್.ಕಾಂಬ್ಳೆ ಮುಂತಾದವರು ಉಪಸ್ಥಿತರಿದ್ದರು.
Leave a Comment