ಹೊನ್ನಾವರ :
ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ.
ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ ಶೆಟ್ಟಿ ತಾತ್ಕಾಲಿಕ ಪರಿಹಾರ ಒದಗಿಸಬೇಕು ಹಾಗೂ ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.
ಕರ್ಕಿ ಕಮಟೆಹಿತ್ಲದಿಂದ ಹೆಗಡೆಹಿತ್ಲದವರೆಗೆ 3 ಕಿ.ಮೀ ತಡೆಗೋಡೆ ದುರಸ್ತಿ ಮಾಡಿ, ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಶಾಸಕರಲ್ಲಿ ಈ ವೇಳೆ ವಿನಂತಿಸಿದರು. ಕೂಡಲೇ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಶಾಸಕಿ ಸೂಚಿಸಿದ್ದಾರೆ.
4 ಮನೆಗಳನ್ನು ತೆರವುಗೊಳಿಸಲು ಸೂಚಿಸಲಾಗಿದ್ದು ಒಂದು ಕುಟುಂಬ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. 3 ದಶಕಗಳ ಹಿಂದೆ ನೆರೆಬಂದಾಗ ಕರ್ಕಿಕೋಡಿಯಿಂದ ರಾಮೇಶ್ವರ ಕಂಬಿಯವರೆಗೆ ತೆಂಗಿನ ತೋಟಕ್ಕೆ ಮತ್ತು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿತ್ತು. ನಂತರ ನಿರ್ಮಿಸಲಾದ ಅಲೆ ತಡೆಗೋಡೆ ಕಡಲ ಅಲೆಯ ಆಪೋಷನಕ್ಕೆ ಸಿಕ್ಕಿ ಅವಶೇಷಗಳಷ್ಟೇ ಉಳಿದುಕೊಂಡಿದ್ದವು.
ಶರಾವತಿ ಅಳವೆ ಬಲಕ್ಕೆ ಸರಿಯುತ್ತಾ ಕರ್ಕಿಯ ತನಕ ಹೋಗಿದ್ದು, ಸಮುದ್ರದ ಹೊಡೆತಕ್ಕೆ ಸಿಕ್ಕ ಭಾಗ ನೇರವಾಗಿ ಅಳವೆಗೆ ಎದುರಾಗಿದೆ. ಕಾರಣ ಜೋರಾದ ಅಲೆ ಹೊಡೆತ ಬೀಳುತ್ತಿದ್ದು ತಡೆಗೋಡೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವಿನಾಯಕ ನಾಯ್ಕ ಹೇಳಿದ್ದಾರೆ.
ನೂರಾರು ಕುಟುಂಬಗಳು ಅನ್ನವಸತಿ ಕಂಡುಕೊಂಡ ಊರು ಕಡಲ ಕೊರೆತದ ಭೀತಿ ಎದುರಿಸುತ್ತಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ ಮನಮಾಡಬೇಕಿದೆ.
ಪ್ರತಿವರ್ಷ ಕಾಡುವ ಕಡಲ ಕೊರೆತವೆಂಬ ಮಾರಿ..!
ಕಳೆದ 3 ದಶಕಗಳಿಂದ ಸಮುದ್ರ ಕೊರೆತವೆಂಬ ಮಾರಿ ಕರಾವಳಿ ತೀರವನ್ನು ಕಾಡುತ್ತ ಬಂದಿದ್ದು, ಇಂದಿಗೂ ಮುಂದುವರಿದಿದೆ. ಹೊನ್ನಾವರ ವ್ಯಾಪ್ತಯಲ್ಲಿ ಸಮುದ್ರದ ಸಮಾನಾಂತರವಾಗಿ ಹಳದೀಪುರದಿಂದ ಶರಾವತಿ ನದಿ ಸಂಗಮದವರೆಗೆ ಹರಿಯುವ ಬಡಗಣಿ ಹೊಳೆ ಇವುಗಳ ನಡುವೆ ಮಲ್ಲುಕುರ್ವೆ, ಪಾವಿನಕುರ್ವೆ ಎಂಬ ಕಂದಾಯ ಗ್ರಾಮಗಳಿದ್ದವು. ಮಲ್ಲುಕುರ್ವೆ ಸಂಪೂರ್ಣವಾಗಿ ಸಮುದ್ರ ಕೊರೆತದಿಂದ ಕಡಲ ಒಡಲು ಸೇರಿದೆ. ಪಾವಿನಕುರ್ವೆಯ ಅರ್ಧಗ್ರಾಮ ಸಮುದ್ರ ಪಾಲಾಗಿದೆ. ಹಳದೀಪುರದಿಂದ ಕರ್ಕಿ ಪಾವಿನಕುರ್ವಾ ಈ 5 ಕಿ.ಮೀ ವ್ಯಾಪ್ತಿಯ ಭಾಗಕ್ಕೆ ಬಹುಕೋಟಿ ವೆಚ್ಚಮಾಡಿ ತಡೆಗೋಡೆ ನಿರ್ಮಿಸಲಾಗಿತ್ತು. ತಡೆಗೋಡೆ ದುರ್ಬಲವಾಗುವುದರ ಜೊತೆ ಅಳವೆ ದಿಕ್ಕು ಬದಲಿಸುವುದರಿಂದ ವರ್ಷಕ್ಕೆ ಒಂದೊಂದು ಭಾಗ ಸಮುದ್ರ ಕೊರೆತಕ್ಕೆ ತುತ್ತಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ತಡೆಗೋಡೆಗಾಗಿ ಹೊಸ ತಂತ್ರಜಾÐನದೊಂದಿಗೆ ಸರ್ಕಾರ ವೆಚ್ಚ ಮಾಡುತ್ತಾ ಬಂದಿದ್ದು ಆದರೆ ಮತ್ತೆ ಮಳೆಗಾಲ ಬಂದಾಗ ಕೊರೆತ ಆರಂಭಿಸುವ ಕಡಲು ಈ ಭಾಗದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿ ಸವಾಲು ಎಸೆಯುತ್ತಲೇ ಬಂದಿದೆ. ಸಮುದ್ರ ಕೊರೆತದಿಂದ ಕಡಲ ಒಡಲು ಸೇರಿದ ಮಲ್ಲುಕುರ್ವೆಯ ನಿವಾಸಿಗಳಿಗೆ ಈ ಹಿಂದೆ ಎಸ್.ಎಂ.ಯಾಹ್ಯಾ ಮಂತ್ರಿಗಳಾಗಿದ್ದಾಗ ಶರಾವತಿ ಎಡದಂಡೆಯಲ್ಲಿ ಹೊರೆದು ಬಂದ ಜಾಗದಲ್ಲಿ ವಸತಿಗೆ ಅವಕಾಶ ನೀಡಲಾಗಿತ್ತು, ಆದರೆ ಇಲ್ಲಿ ಪುರ್ನವಸತಿ ಕಂಡುಕೊಂಡವರಿಗೆ ಇನ್ನೂ ಹಕ್ಕು ಪತ್ರ ದೊರೆತಿಲ್ಲ. ಆಗೊಮ್ಮೆ ಈಗೊಮ್ಮೆ ತಡೆಗೋಡೆ ಕಾರ್ಯ ನಡೆಯುತ್ತಲೇ ಇದೆ. ಅಲೆ ತಡೆಗೋಡೆ ಕಾಮಗಾರಿಗಾಗಿ ಕೋಟ್ಯಾಂತರ ಹಣ ವೆಚ್ಚಮಾಡುತ್ತಲೇ ಬರಲಾಗಿದೆ. ಕಡಲಕೊರೆತವೂ ನಿಲ್ಲದು,.. ತಡೆಗೋಡೆ ಕಾಮಗಾರಿಯೂ ನಿಲ್ಲದೂ,.. ಎಂಬ ಪರಿಸ್ಥಿತಿ ಮುಂದುವರೆದು ಬಂದಿದೆ. ಬದಲಿಗೆ ಆತಂಕದಲ್ಲಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಬೇರೆ ಸ್ಥಳದಲ್ಲಿ ಪುರ್ನವಸತಿ ಕಲ್ಪಿಸುವ ಅವಶ್ಯಕತೆ ಇದೆ.
ತಹಶೀಲ್ದಾರ ವಿ.ಆರ್.ಗೌಡ, ಉಪವಿಭಾಗಾಧಿಕಾರಿ ಮಂಜುನಾಥ, ತಾ.ಪಂ.ಸದಸ್ಯ ತುಕಾರಾಮ ನಾಯ್ಕ, ಗ್ರಾಮ ಪಂಚಾಯತ ಉಪಾಧ್ಯಕ್ಷೆ ಕಲ್ಪನಾ ನೊರಾನಾ, ವಿನಾಯಕ ಶೇಟ್ ಹಳದೀಪುರ, ಅಜಿತ ತಾಂಡೇಲ, ನಾಗಪ್ಪ ನಾಯ್ಕ, ಪುರಂದರ ನಾಯ್ಕ, ಸೀತಾರಾಮ ನಾಯ್ಕ, ಅಣ್ಣಪ್ಪ ಆಚಾರಿ, ಮಂಜುನಾಥ ನಾಯ್ಕ, ಚಿದಾನಂದ ನಾಯ್ಕ ಹಾಗೂ ಇತರ ಜನಪ್ರತಿನಿಧಿಗಳು ಹಾಜರಿದ್ದರು.
Leave a Comment